ಹತ್ರಸ್ ಪ್ರಕರಣ: ಪೊಲೀಸರ ಹೇಳಿಕೆಗೆ ತದ್ವಿರುದ್ಧ ವರದಿ ನೀಡಿದ ಅಲಿಗಡ ಆಸ್ಪತ್ರೆ

Update: 2020-10-04 13:21 GMT

ಹೊಸದಿಲ್ಲಿ,ಅ.4: ದೇಶವನ್ನೇ ನಡುಗಿಸಿರುವ ಹತ್ರಸ್ ಪ್ರಕರಣದಲ್ಲಿ ಹದಿಹರೆಯದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ ಎಂಬ ಉತ್ತರ ಪ್ರದೇಶ ಪೊಲೀಸರ ಹೇಳಿಕೆಯನ್ನು ಆಕೆಯನ್ನು ಮೊದಲು ದಾಖಲಿಸಲಾಗಿದ್ದ ಅಲಿಗಡದ ಜವಾಹರಲಾಲ ನೆಹರು ಮೆಡಿಕಲ್ ಕಾಲೇಜು ಆಸ್ಪತ್ರೆ (ಜೆಎನ್‌ಎಂಸಿಎಚ್)ಯು ಸಿದ್ಧಪಡಿಸಿರುವ ಮೆಡಿಕೋ-ಲೀಗಲ್ ತಪಾಸಣಾ ವರದಿ (ಎಂಎಲ್‌ಸಿ)ಯು ಬುಡಮೇಲುಗೊಳಿಸಿದೆ. ಯುವತಿಯು ತೀವ್ರ ಗಾಯಗಳಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿಕೊಂಡಿದ್ದರು. ತನ್ನನ್ನು ಅತ್ಯಾಚಾರ ಮಾಡಲಾಗಿತ್ತು ಎಂದು ಯುವತಿಯು ನೀಡಿದ್ದ ವಿವರಗಳನ್ನು ತಮ್ಮ ವರದಿಯಲ್ಲಿ ದಾಖಲಿಸಿರುವ ಜೆಎನ್‌ಎಂಸಿಎಚ್ ವೈದ್ಯರು, ತಮ್ಮ ಪ್ರಾಥಮಿಕ ತಪಾಸಣೆಯಲ್ಲಿ ಬಲ ಪ್ರಯೋಗದ ಸುಳಿವನ್ನು ನೀಡಿದ್ದಾರೆ ಎಂದು thewire.in ವರದಿ ಮಾಡಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ, ಯುವತಿಯ ಮೇಲೆ ನಡೆದಿದ್ದ ದಾಳಿಯು ಅತ್ಯಾಚಾರವನ್ನು ಒಳಗೊಂಡಿತ್ತೇ ಇಲ್ಲವೇ ಎಂಬ ಕುರಿತು ತಮ್ಮ ಅಭಿಪ್ರಾಯವನ್ನು ಜೆಎನ್‌ಎಂಸಿಎಚ್ ವೈದ್ಯರು ಕಾಯ್ದಿರಿಸಿದ್ದರು ಮತ್ತು ಮುಂದಿನ ಪರೀಕ್ಷೆಗಾಗಿ ಆಗ್ರಾದಲ್ಲಿರುವ ಸರಕಾರಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ಕ್ಕೆ ಹಸ್ತಾಂತರಿಸಿದ್ದರು. 

ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಲೈಂಗಿಕ ಅಪರಾಧವೊಂದು ನಡೆದಿತ್ತೇ ಇಲ್ಲವೇ ಎನ್ನುವುದನ್ನು ತಪಾಸಣೆ ನಡೆಸುವ ವೈದ್ಯರು ‘ನಿರಾಕರಿಸುವಂತಿಲ್ಲ ಮತ್ತು ದೃಢಪಡಿಸುವಂತೆಯೂ ಇಲ್ಲ’. ‘ಸ್ಥಳೀಯ ಪರೀಕ್ಷೆಯ ಆಧಾರದಲ್ಲಿ, ಬಲಪ್ರಯೋಗದ ಲಕ್ಷಣಗಳಿದ್ದವು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಆದರೆ ಎಫ್‌ಎಸ್‌ಎಲ್ ವರದಿಯು ಬಾಕಿಯಿರುವುದರಿಂದ ಸಂಭೋಗಕ್ಕೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ಕಾಯ್ದಿರಿಸಲಾಗಿದೆ ’ ಎಂದು ವೈದ್ಯಕೀಯ ತಪಾಸಣೆಯನ್ನು ನಡೆಸಿದ್ದ ಜೆನ್‌ಎಂಸಿಎಚ್‌ನ ಸಹಾಯಕ ಪ್ರೊಫೆಸರ್ ಡಾ. ಫೈಝ್ ಅಹ್ಮದ್ ಅವರು ಷರಾ ಬರೆದಿದ್ದಾರೆ.

ಎರಡು ವಾರಗಳ ಜೀವನ್ಮರಣ ಹೋರಾಟದ ಬಳಿಕ ಸೆ.29ರಂದು ಕೊನೆಯುಸಿರೆಳೆದಿರುವ ಯುವತಿಯು ತನ್ನ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ದುಪಟ್ಟಾದಿಂದ ತನ್ನನ್ನು ಉಸಿರುಗಟ್ಟಿಸಿದ್ದು ಸೇರಿದಂತೆ ಒದಗಿಸಿದ್ದ ಅಪರಾಧದ ವಿವಿಧ ವಿವರಗಳನ್ನು 54 ಪುಟಗಳ ಜೆಎನ್‌ಎಂಸಿಎಚ್ ವರದಿಯು ಒಳಗೊಂಡಿದೆ. ಯುವತಿಯ ಎರಡೂ ಕೈಗಳು ಮತ್ತು ಕಾಲುಗಳು ನಿಶ್ಶಕ್ತಗೊಂಡಿದ್ದವು ಮತ್ತು ಕಾಲುಗಳ ಕೆಳಭಾಗದಿಂದ ಪೃಷ್ಠಗಳವರೆಗೆ ಆಕೆಯ ಶರೀರವು ಸಂವೇದನೆಯನ್ನು ಕಳೆದುಕೊಂಡಿತ್ತು ಎನ್ನುವುದನ್ನೂ ವರದಿಯು ಉಲ್ಲೇಖಿಸಿದೆ.

ಸೆ.14ರಂದು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಯುವತಿ ಸೆ.22ರಂದಷ್ಟೇ ತನ್ನ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದಳು ಎಂದು ವರದಿಯಲ್ಲಿ ಹೇಳಲಾಗಿದೆ. ಅದೇ ದಿನ ಜೆನ್‌ಎಂಸಿಎಚ್ ಪ್ರಕರಣವನ್ನು ಆಗ್ರಾದ ಎಫ್‌ಎಸ್‌ಎಲ್‌ಗೆ ಒಪ್ಪಿಸಿತ್ತು.

ಸಂತ್ರಸ್ತ ಯುವತಿಯು ಆರೋಪಿಸಿರುವಂತೆ ಸೆ.14ರಂದು ಬೆಳಿಗ್ಗೆ ಒಂಭತ್ತು ಗಂಟೆಗೆ ಬುಲಗಡಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಯ ಗ್ರಾಮದವರೇ ಆದ ನಾಲ್ವರು ಪರಿಚಿತ ವ್ಯಕ್ತಿಗಳು ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದರು. ಈ ಘಟನೆಯ ಸಂದರ್ಭ ಯುವತಿ ಪ್ರಜ್ಞೆ ಕಳೆದುಕೊಂಡಿದ್ದಳು ಎಂದು ವರದಿಯು ತಿಳಿಸಿದೆ.

ಸೆ.22ರಂದೇ ಜೆಎನ್‌ಎಂಸಿಎಚ್ ಪ್ರಕರಣವನ್ನು ಎಫ್‌ಎಸ್‌ಎಲ್‌ಗೆ ಒಪ್ಪಿಸಿತ್ತು. ಆದರೆ ಎಫ್‌ಎಸ್‌ಎಲ್ ಆಕೆಯ ಸ್ಯಾಂಪಲ್‌ಗಳನ್ನು ಮೂರು ದಿನ ವಿಳಂಬವಾಗಿ ಸೆ.25ರಂದಷ್ಟೇ ಸಂಗ್ರಹಿಸಿತ್ತು ಮತ್ತು ಈ ವೇಳೆಗಾಗಲೇ ಆಕೆ ಮೊದಲ ಬಾರಿ ವೈದ್ಯಕೀಯ ತಪಾಸಣೆಗೊಳಗಾಗಿ 11 ದಿನಗಳು ಕಳೆದು ಹೋಗಿದ್ದವು. ಇಷ್ಟೊಂದು ವಿಳಂಬವಾಗಿ ಸಂಗ್ರಹಿಸಿದ್ದ ಸ್ಯಾಂಪಲ್‌ಗಳ ಕುರಿತು ಎಫ್‌ಎಸ್‌ಎಲ್ ಸಿದ್ಧಪಡಿಸಿದ್ದ ವರದಿಯು ಉತ್ತರ ಪ್ರದೇಶದ ಪೊಲೀಸರು ಪ್ರಕರಣದಲ್ಲಿ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ನಿರಾಕರಿಸಲು ಆಧಾರವಾಗಿತ್ತು ಎಂದು thewire.in ವರದಿ ಮಾಡಿದೆ.

ಎಫ್‌ಎಸ್‌ಎಲ್ ಸಂಗ್ರಹಿಸಿದ್ದ ಸ್ಯಾಂಪಲ್‌ಗಳಲ್ಲಿ ವೀರ್ಯದ ಕುರುಹುಗಳಿರಲಿಲ್ಲ ಎನ್ನುವುದು ಯುವತಿಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ ಎನ್ನುವುದನ್ನು ಸಾಬೀತುಗೊಳಿಸಿದೆ ಮತ್ತು ಜಾತಿ ಉದ್ವಿಗ್ನತೆಯನ್ನು ಸೃಷ್ಟಿಸಲು ವಿಷಯವನ್ನು ತಿರುಚಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ ಕುಮಾರ್ ಅವರು ಗುರುವಾರ ತಿಳಿಸಿದ್ದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕುಮಾರ್, ಈ ಹೇಳಿಕೆಯನ್ನು ನೀಡುವಾಗ ಜೆಎನ್‌ಎಂಸಿಎಚ್ ತನ್ನ ವರದಿಯನ್ನು ಸಿದ್ಧಗೊಳಿಸಿತ್ತು ಎನ್ನುವುದು ತನಗೆ ಗೊತ್ತಿತ್ತು ಎಂದಿದ್ದಾರೆ.

ಕುತೂಹಲದ ವಿಷಯವೆಂದರೆ ಸೆ.14ರಂದು ಯುವತಿಯನ್ನು ಮೊದಲ ಬಾರಿಗೆ ತಪಾಸಣೆಗೊಳಪಡಿಸಿದ ವಿವರಗಳೊಂದಿಗೆ ಆರಂಭಗೊಂಡಿರುವ ವರದಿಯು, ಆಕೆಯನ್ನು ಉಸಿರುಗಟ್ಟಿಸಲಾಗಿದೆಯಷ್ಟೇ ಎಂದು ತಿಳಿಸಿದೆ ಮತ್ತು ದಾಳಿಕೋರ ಅಪರಿಚಿತನಾಗಿದ್ದಾನೆ ಎಂಬ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಯುವತಿಯು ತನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂದು ವೀಡಿಯೊದಲ್ಲಿ ತಿಳಿಸಿದ್ದಳು ಮತ್ತು ಮೇಲ್ಜಾತಿಯ ಠಾಕೂರ್ ಸಮುದಾಯದ ನಾಲ್ವರು ಆರೋಪಿಗಳನ್ನು ಹೆಸರಿಸಿದ್ದಳು ಎನ್ನುವುದನ್ನು ಪರಿಗಣಿಸಿದರೆ ಪ್ರಾಥಮಿಕ ಎಂಎಲ್‌ಸಿಯಲ್ಲಿ ಈ ಅಂಶಗಳನ್ನು ಕೈಬಿಟ್ಟಿರುವುದು ಆಕೆಯನ್ನು ಆಸ್ಪತ್ರೆಗೆ ತಂದಿದ್ದ ಪೊಲೀಸರು ಮತ್ತು ಘಟನೆಯ ಪೂರ್ಣ ಚಿತ್ರಣವನ್ನು ಪಡೆಯಲು ಆಕೆಯನ್ನು ತಪಾಸಣೆಗೊಳಪಡಿಸಿದ್ದ ವೈದ್ಯರ ಕುರಿತು ಸಂಶಯಗಳನ್ನು ಸೃಷ್ಟಿಸಿದೆ. 

ಎಫ್‌ಎಸ್‌ಎಲ್ ತನ್ನ ವರದಿಯಲ್ಲಿ ಯುವತಿಯಿಂದ ಸಂಗ್ರಹಿಸಲಾಗಿದ್ದ ಸ್ಯಾಂಪಲ್‌ಗಳಲ್ಲಿ ವೀರ್ಯ ಪತ್ತೆಯಾಗಿಲ್ಲ ಎಂದು ಹೇಳಿದೆ. ಜೆಎನ್‌ಎಂಸಿಎಚ್‌ಯ ವೈದ್ಯ ಹಮ್ಝಾ ಮಲಿಕ್ ಹೇಳಿಕೆಯಂತೆ ವೀರ್ಯಾಣುವಿನ ಜೀವಿತಾವಧಿ 2-3 ದಿನಗಳನ್ನು ಮೀರುವುದಿಲ್ಲ. ಘಟನೆ ನಡೆದ 72 ಗಂಟೆಗಳೊಳಗೆ ಸ್ಯಾಂಪಲ್ ಸಂಗ್ರಹಿಸಿದ್ದರೆ, ಅದೂ ಸಂತ್ರಸ್ತೆ ಈ ಅವಧಿಯಲ್ಲಿ ಬಾತ್ ರೂಮ್ ಬಳಸಿಲ್ಲ ಮತ್ತು ಸ್ನಾನವನ್ನು ಮಾಡಿಲ್ಲ ಎಂದಿದ್ದರೆ ಮಾತ್ರ ಅಂತಹ ಸ್ಯಾಂಪಲ್ ಪರೀಕ್ಷೆಗೆ ಅರ್ಹವಾಗುತ್ತದೆ. ಅತ್ಯಾಚಾರವೆಂದು ಪರಿಗಣಿಸಲಾಗುವ ಅಪರಾಧ ನಡೆಯಲು ವೀರ್ಯ ಸ್ಖಲನ ಆಗಬೇಕು ಎನ್ನುವುದು ಅಗತ್ಯವೇನೂ ಇಲ್ಲ. ಹೀಗಿರುವಾಗ ಎಫ್‌ಎಸ್‌ಎಲ್ 11 ದಿನಗಳ ಬಳಿಕ ಸಂಗ್ರಹಿಸಿದ್ದ ಸ್ಯಾಂಪಲ್‌ಗಳನ್ನೇ ಪೊಲೀಸರು ನಂಬಿರುವುದು ವಿಪರ್ಯಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News