ಉಡುಪಿ: ವಸತಿರಹಿತ ಕುಟುಂಬಕ್ಕೆ ಮನೆ ನಿರ್ಮಿಸಲು ಶಿಲಾನ್ಯಾಸ
ಉಡುಪಿ, ಅ.4: ಉಡುಪಿ ಧರ್ಮ ಪ್ರಾಂತ್ಯದ ವತಿಯಿಂದ ವಸತಿರಹಿತರಿಗೆ ವಸತಿ ಕಲ್ಪಿಸುವ ಯೋಜನೆಯಡಿ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ನ ನರ್ನಾಡು ವಾರ್ಡಿನ ಬೆನ್ನ ಡಿಸೋಜ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ರವಿವಾರ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಚರ್ಚಿನ ಧರ್ಮಗುರು ವಂ.ಅನಿಲ್ ಪ್ರಕಾಶ್ ಕ್ಯಾಸ್ತಲಿನೋ ಕಾರ್ಯಕ್ರಮಕ್ಕೆ ಆಶೀರ್ವಚನಗೈದರು. ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ಅಂತೋನಿ ಮಸ್ಕರೇನ್ಹಸ್, ಎಸ್ವಿಪಿ ಅಧ್ಯಕ್ಷರು ಸದಸ್ಯರು, ಆರ್ಥಿಕ ಸಮಿತಿಯ ಸದಸ್ಯರು, ನಾರ್ನಾಡು ವಾರ್ಡಿನ ಗುರಿಕಾರ ಕ್ವೀನಿ ಮೇರಿ ಡಿಸೋಜ ಹಾಗೂ ಸದಸ್ಯರು ಉಪಸ್ಥಿತರಿದ್ದರು.
700 ಚ.ಮೀ ವಿಸ್ತೀರ್ಣ ಹಾಗೂ ಸುಮಾರು 7ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಈ ಮನೆಯ ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಎಸ್ವಿಪಿ, ಆರ್ಥಿಕ ಸಮಿತಿ, ದಾನಿಗಳ ಸಹಾಯದಿಂದ ಹಾಗೂ ನರ್ನಾಡು ವಾರ್ಡಿನ ಹಬ್ಬವನ್ನು ಆಚರಿಸದೆ ಉಳಿಸಿಕೊಂದಿದ್ದ ಮೊತ್ತವನ್ನು ಧರ್ಮಪ್ರಾಂತ್ಯದ ಯೋಜನೆಯಡಿ ಬರುವ ಮೊತ್ತಕ್ಕೆ ಕ್ರೂಡಿಕರಿಸಿ ಕೊಂಡು ಮನೆಯನ್ನು ನಿರ್ಮಿಸಿಕೊಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.