ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಯಿಂದ ವಂಚನೆ ಯತ್ನ: ದ.ಕ.ಜಿಲ್ಲೆಯ ಆರು ಮಂದಿ ಪೊಲೀಸ್ ವಶಕ್ಕೆ
ಮಂಗಳೂರು, ಅ.6: ಆಂಧ್ರಪ್ರದೇಶದ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ 117 ಕೋ.ರೂ. ವಂಚಿಸಲು ಷಡ್ಯಂತ್ರ ರೂಪಿಸಿದ ಆರೋಪ ದಲ್ಲಿ ದ.ಕ. ಜಿಲ್ಲೆಯಿಂದ ಬಂಧಿತರಾದ 6 ಮಂದಿಯನ್ನು ಆಂಧ್ರಪ್ರದೇಶ ಎಸಿಬಿ ತಂಡವು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಮತ್ತೆ ಕಸ್ಟಡಿಗೆ ಪಡೆದು ಆಂಧ್ರಪ್ರದೇಶಕ್ಕೆ ಆರೋಪಿಗಳನ್ನು ಕರೆದೊಯ್ದಿದೆ ಎಂದು ತಿಳಿದು ಬಂದಿದೆ.
ಮೂಡುಬಿದಿರೆಯ ಯೋಗೀಶ್ ಆಚಾರ್ಯ (40), ಉದಯ ಶೆಟ್ಟಿ ಕಾಂತಾವರ (35), ಮಂಗಳೂರಿನ ಬ್ರಿಜೇಶ್ ರೈ (35), ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸಹಿತ 6 ಮಂದಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ
ಆಂಧ್ರದ ಮುಖ್ಯಮಂತ್ರಿ ಪರಿಹಾರ ನಿಧಿ ವಂಚನೆಯ ಬಗ್ಗೆ ಆಂಧ್ರಪ್ರದೇಶ ಕಂದಾಯ ಇಲಾಖೆ ಸಹಾಯಕ ಕಾರ್ಯದರ್ಶಿ ಪಿ.ಮುರಳಿಕೃಷ್ಣ ರಾವ್ ನೀಡಿದ ದೂರಿನ ಆಧಾರದ ಮೇಲೆ ಸೆ. 21ರಂದು ತುಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತುಲ್ಲೂರ್ ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ರೆಡ್ಡಿ ಈ ಬಗ್ಗೆ ತನಿಖೆ ನಡೆಸಿದ್ದರು. ಈ ಮಧ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎ.ಎಸ್. ಜಗನ್ ರೆಡ್ಡಿ ಸಮಗ್ರ ತನಿಖೆ ನಡೆಸುವಂತೆ ನಗರ ಭ್ರಷ್ಟಾಚಾರ ಪತ್ತೆದಳ (ಎಸಿಬಿ)ಗೆ ಸೂಚಿಸಿದ್ದರು. ತನಿಖೆ ನಡೆಸಿದಾಗ ಆರೋಪಿಗಳು ಬೇನಾಮಿ ದಾಖಲೆ ಹಾಗೂ ಚೆಕ್ಗಳನ್ನು ಬಳಸಿಕೊಂಡು ಹೊಸದಿಲ್ಲಿ, ಕರ್ನಾಟಕ, ಕಲ್ಕತ್ತಾದಲ್ಲಿ ಜಾಲವಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ಮೂಡುಬಿದಿರೆಯ ಎಸ್ಬಿಐ ಬ್ಯಾಂಕ್ನಲ್ಲಿರುವ ಖಾತೆಗೆ ಯೊಗೀಶ್ ಆಚಾರ್ಯ 52 ಕೋ.ರೂ. ಚೆಕ್ ಹಾಕಿದ್ದು, ನಗದು ವರ್ಗಾವಣೆ ಮಾಡುವ ವೇಳೆಗೆ ಈ ಚೆಕ್ನ್ನು ತಡೆಹಿಡಿಯುವಂತೆ ಆಂಧ್ರ ಎಸಿಬಿಯಿಂದ ಬ್ಯಾಂಕ್ಗೆ ಮಾಹಿತಿ ಬಂದಿತ್ತು. ಕೂಡಲೇ ಆಂಧ್ರ ಎಸಿಬಿ ಮತ್ತು ವಿಶೇಷ ತನಿಖಾ ತಂಡ ಮೂಡುಬಿದಿರೆಗೆ ಆಗಮಿಸಿ ಯೋಗೀಶ್ ಆಚಾರ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಯೋಗೀಶ್ ಆಚಾರ್ಯ ನೀಡಿದ ಮಾಹಿತಿ ಮೇರೆಗೆ ಇತರ 5 ಮಂದಿಯನ್ನು ಬಂಧಿಸಲಾಗಿದೆ.