ಒಡಿಶಾ:ಪೆಟ್ರೋಲ್ ಪಂಪ್‌ನಲ್ಲಿ ಭಾರೀ ಬೆಂಕಿ ಆಕಸ್ಮಿಕ,ಎಂಟು ಜನರಿಗೆ ಗಾಯ

Update: 2020-10-07 16:06 GMT

 ಭುವನೇಶ್ವರ,ಅ.7: ಇಲ್ಲಿಯ ರಾಜಭವನದ ಸಮೀಪದಲ್ಲಿರುವ ಇಂಡಿಯನ್ ಆಯಿಲ್‌ಗೆ ಸೇರಿದ ಪೆಟ್ರೋಲ್ ಪಂಪ್‌ನಲ್ಲಿ ಬುಧವಾರ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದ್ದು,ಎಂಟು ಜನರು ಗಾಯಗೊಂಡಿದ್ದಾರೆ.

 ಗಾಯಾಳುಗಳನ್ನು ಸ್ಥಳೀಯ ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವಲ್ಲಿ ಸಫಲವಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಬೆಂಕಿಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸ್ ಆಯುಕ್ತ ಎಸ್.ಎಸ್.ಸಾರಂಗಿ ತಿಳಿಸಿದರು.

 ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು,ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರವು ಭರಿಸಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News