ಗಾಂಧಿ ಒಂದು ಅದಮ್ಯ ಚೇತನ: ಅಂಬಾತನಯ ಮುದ್ರಾಡಿ
ಉಡುಪಿ, ಅ.12: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಹಾಗೂ ಎನ್ಎಸ್ಎಸ್ ಘಟಕಗಳ ವತಿಯಿಂದ ಗಾಂದಿ ಮತ್ತು ಯುವಜನತೆ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ಪಾರ್ತಿಸುಬ್ಬ ಪ್ರಶಸ್ತಿ ವಿಜೇತರು ಹಾಗೂ ಹಿರಿಯ ಸಾಹಿತಿಯೂ ಆದ ಅಂಬಾತನಯ ಮುದ್ರಾಡಿ ಗಾಂಧೀಜಿ ಬಳಸಿದ ಚರಕಕ್ಕೆ ನೂಲು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಾಂಧಿ ಒಂದು ಅದಮ್ಯಚೇತನ. ಸತ್ಯ ಮತ್ತು ಅಹಿಂಸೆ ಅವರ ಆಯುಧಗಳು. ಗಾಂಧೀಜಿ ವಾರ್ಧಾದಲ್ಲಿ ಬುನಾದಿ ಶಿಕ್ಷಣದ ಮೂಲಕ ಸ್ವಾವಲಂಬನೆಯ ದಾರಿಯನ್ನು ತೋರಿದರು.ಗಾಂಧಿಮಾತೃಭಾಷಾ ಶಿಕ್ಷಣವನ್ನು ಬಲವಾಗಿ ನಂಬಿದ್ದರು ಎಂದರು.
ಗಾಂಧೀಜಿ ಪ್ರಕಾರ ಶಿಕ್ಷಣವೆಂದರೆ ಚಾರಿತ್ರ್ಯ ನಿರ್ಮಾಣವೇ ಹೊರತು ಉದ್ಯೋಗಕ್ಕಾಗಿ ಶಿಕ್ಷಣವಾಗಿರಲಿಲ್ಲ. ಇಂದು ಸತ್ಯವನ್ನು ಹೇಳಿ ಬದುಕಲಾಗದ ಕಾಲಘಟ್ಟದಲ್ಲಿ ನಾವಿದ್ದೇವೆ. ಗಾಂಧಿ ಜಯಂತಿಯನ್ನು ಜನಜಾಗೃತಿಯ ದಿನವನ್ನಾಗಿ ಆಚರಿಸಿ ಗಾಂಧಿ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸಬೇಕು ಎಂದು ಸಂದೇಶ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ನಿಕೇತನ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿ ಆಲೋಚನೆ, ನುಡಿ-ನಡೆಯಲ್ಲಿ ಸಾಮರಸ್ಯವನ್ನು ಪ್ರತಿಪಾದಿಸಿ ಅದರಂತೆ ಬದುಕಿದವರು ಎಂದರು. ನಿವೃತ್ತ ಶಿಕ್ಷಕಿ ಲಲಿತಾ ಮುದ್ರಾಡಿ ಉಪಸ್ಥಿತ ರಿದ್ದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುಭಾಷ್ ಎಚ್.ಕೆ.ಸ್ವಾಗತಿಸಿ, ಐಕ್ಯೂಎಸಿ ಸಂಚಾಲಕ ಪ್ರವೀಣ ಶೆಟ್ಟಿ ವಂದಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಪಿ.ಕೆ. ಕಾರ್ಯಕ್ರಮ ನಿರೂಪಿಸಿದರು.