ಕೋವಿಡ್-19 ನಿಯಂತ್ರಣಕ್ಕೆ ಹಂತ ಹಂತವಾಗಿ ಕ್ರಮ: ಉಡುಪಿ ಡಿಸಿ ಜಗದೀಶ್
ಉಡುಪಿ, ಅ.13: ಉಡುಪಿ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಸಾಕಷ್ಟು ಜೀವ ಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಲಯನ್ಸ್ ಜಿಲ್ಲೆಯ ವತಿಯಿಂದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಮಂಗಳವಾರ ಕೋವಿಡ್ -19 ಮುಂಜಾಗ್ರತೆ ಮತ್ತು ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ನೀಡಲಾದ 47ಲಕ್ಷ ಮೊತ್ತದ ಸಾಮಾಗ್ರಿಗಳನ್ನು ಸ್ವಿೀಕರಿಸಿ ಅವರು ಮಾತನಾಡುತಿದ್ದರು.
ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ 20ಸಾವಿರ ಪ್ರಕರಣಗಳು ಒಂದೇ ಬಾರಿಗೆ ಕಾಣಿಸಿಕೊಂಡಿದ್ದರೆ ನಿಯಂತ್ರಿಸಲು ಅಸಾಧ್ಯವಾಗುತ್ತಿತ್ತು ಆ ಕಾರಣಕ್ಕಾಗಿ ಲಾಕ್ಡೌನ್, ಸಭೆ ಸಮಾರಂಭ ನಿಷೇಧ, ಮಾಸ್ಕ್ ಕಡ್ಡಾಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಸರಕಾರದಿಂದ ಯಾವುದೇ ಸೌಲಭ್ಯಗಳು ಸಿಗದೆ ಇರುತ್ತಿದ್ದಾಗ ದಾನಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕೋವಿಡ್ ಸಂಬಂಧ ಅಗತ್ಯ ವಸ್ತುಗಳನ್ನು ಒದಗಿಸಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ.ಹೆಗಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೊರೊನ ಸೈನಿಕ ಟಾಸ್ಕ್ಫೋರ್ಸ್ ಅಧಿಕಾರಿ ಡಾ.ಪಿ. ಆರ್.ಎಸ್.ಚೇತನ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಸುಧಿೀರ್ ಚಂದ್ರ ಸೂಡ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಮಲ್ಟಿಪಲ್ ಅಧ್ಯಕ್ಷ ಡಾ.ನಾಗರಾಜ ಬಾಯರಿ, ಜಿಲ್ಲಾ ಉಪ ಗವರ್ನರ್ ವಿಶ್ವನಾಥ್ ಶೆಟ್ಟಿ, ಜಿಲ್ಲಾ ಮೆಂಟರ್ ಶ್ರೀಧರ ಶೆಣವ ಉಪಸ್ಥಿತರಿದ್ದರು. ಕ್ಯಾಬಿನೆಟ್ ಕಾರ್ಯದರ್ಶಿ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.