ಘನತ್ಯಾಜ್ಯ ವಿಲೇವಾರಿಗೆ ಉಡುಪಿ ಜಿಲ್ಲೆ ಮಾದರಿ: ತಾಪಂ ಅಧ್ಯಕ್ಷೆ
ಉಡುಪಿ, ಅ.15: ಘನತ್ಯಾಜ್ಯ ಘಟಕಗಳನ್ನು ಬ್ರ್ಯಾಂಡಿಂಗ್ ಮಾಡುವ ಕಾರ್ಯ ಉತ್ತಮವಾಗಿದ್ದು, ಉಡುಪಿ ಜಿಲ್ಲೆ ಈ ದಿಸೆಯಲ್ಲಿ ಮಾದರಿಯ ಹೆಜ್ಜೆಗಳನ್ನಿಟ್ಟಿದೆ ಎಂದು ಬ್ರಹ್ಮಾವರ ತಾಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಹೇಳಿದ್ದಾರೆ.
ಬ್ರಹ್ಮಾವರ ಸಮೀಪದ ಕಾಡೂರು ಗ್ರಾಪಂನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಂಡಿಂಗ್ ಲೋಕಾರ್ಪಣೆ ಮತ್ತು ‘ಸ್ವಚ್ಛೋತ್ಸವ-ನಿತ್ಯೋತ್ಸವ’ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತ ನಾಡುತಿದ್ದರು. ಜಿಲ್ಲೆ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯ ಕುರಿತು ನಾಗರಿಕರು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದವರು ಹೇಳಿದರು.
ಬ್ರಹ್ಮಾವರ ತಾಲೂಕು ಉಪಾಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿ ಹಂದಾಡಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮನ್ವಯ ವಿದ್ದರೆ ಸ್ವಚ್ಚತೆಯೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಕಾಡೂರು ಗ್ರಾಪಂ ಉತ್ತಮ ಉದಾಹರಣೆಯಾಗಿದೆ ಎಂದರು.
ತಾಪಂ ಸದಸ್ಯ ಭುಜಂಗ ಶೆಟ್ಟಿ ಕಾಡೂರು ಮಾತನಾಡಿ, ತ್ಯಾಜ್ಯ ನಿರ್ವಹಣೆ ಕುರಿತು ವೈಯಕ್ತಿಕ ಹಂತದಿಂದ ಜಾಗೃತಿ ಮೂಡಿದರೆ ಕಾರ್ಯ ಸುಲಭ ಎಂದು ತಿಳಿಸಿದರು. ಕಾಡೂರು- ನಡೂರು ಗ್ರಾಮಗಳ ಪ್ರಯತ್ನ ಎಲ್ಲಾ ಗ್ರಾಮಗಳಲ್ಲಿ ಅನುಷ್ಠಾನಗೊಳ್ಳಲಿ ಎಂದವರು ಆಶಿಸಿದರು.
ಕಾಡೂರು ಗ್ರಾಪಂನ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬ್ರಹ್ಮಾವರ ತಾಪಂ ಕಾರ್ಯ ನಿರ್ವ ಹಣಾಧಿಕಾರಿ ಎಚ್.ಇಬ್ರಾಂಪೂರ, ಕಾಡೂರು ಗ್ರಾಪಂ ಆಡಳಿತಾಧಿಕಾರಿ ಮಂಜುನಾಥ ಅಡಿಗ, ಸ್ವಚ್ಚ ಭಾರತ್ ಮಿಷನ್ನ ಜಿಲ್ಲಾ ಸಮಾ ಲೋಚಕ ಸುಧೀರ್ ಹಾಗೂ ಪ್ರದೀಪ್, ಗ್ರಾಪಂ ಮಾಜಿ ಸದಸ್ಯ ಸತ್ಯನಾರಾಯಣ ಶೆಟ್ಟಿ, ನಾಗರತ್ನ, ಹೆಗ್ಗುಂಜೆ ಗ್ರಾಪಂ ಪಿಡಿಓ ಅನಿಲ್ ಕುಮಾರ್, ಶ್ರೀವಾಣಿ ಪ್ರೌಢಶಾಲೆ ಮುಖ್ಯ ಅಧ್ಯಾಪಕ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಕಾಡೂರು ಗ್ರಾಪಂನ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಹೇಶ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.