ಅಕ್ರಮ ಅಕ್ಕಿ ಸಾಗಾಟ ಆರೋಪ : ಇಬ್ಬರ ಬಂಧನ
ಕಾಪು, ಅ.17: ಮನೆಮನೆಗಳಿಂದ ಸಂಗ್ರಹಿಸಿದ ಅನ್ನಭಾಗ್ಯದ ಅಕ್ಕಿಯನ್ನು ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕಾಪು ಪೊಲೀಸರು ಹಾಗೂ ಆಹಾರ ನಿರೀಕ್ಷಕರ ತಂಡ ಅ.17ರಂದು ಬೆಳಗ್ಗೆ ಕಾಪು ಮಹಾಬಲ ಮಾಲ್ ಕಟ್ಟಡದ ಎದುರು ಬಂಧಿಸಿದೆ.
ಕಾಪು ತೆಂಕುಪೇಟೆಯ ಶ್ರೀಕಾಂತ ಭಟ್(52) ಹಾಗೂ ಚಾಲಕ, ಪೊಲಿಪು ಗುಡ್ಡೆಯ ಶಂಕರ ಪೂಜಾರಿ(55) ಬಂಧಿತ ಆರೋಪಿಗಳು. ಇವರು ಸರಕಾರ ದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಟ ಮಾಡು ತ್ತಿದ್ದು, ಈ ಕುರಿತು ದೊರೆತ ಖಚಿತ ಮಾಹಿತಿಯಂತೆ ಕಾಪು ತಾಲೂಕು ಪ್ರಭಾರ ಆಹಾರ ನಿರೀಕ್ಷಕಿ ಮೌನ ಕೆ. ಹಾಗೂ ಕಾಪು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರಿಂದ 77 ಚೀಲಗಳಲ್ಲಿದ್ದ 46,200 ರೂ. ಮೌಲ್ಯದ ಒಟ್ಟು 3850 ಕೆ.ಜಿ. ಅಕ್ಕಿಯನ್ನು ಮತ್ತು 7 ಲಕ್ಷ ರೂ. ಮೌಲ್ಯದ 407 ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.