ದಲಿತ ಚಳವಳಿಗೆ ಯುವಜನಾಂಗ ಮುಂದಾಗಲಿ: ಜಯನ್ ಮಲ್ಪೆ

Update: 2020-10-18 14:18 GMT

ಕಾಪು ಅ.18: ದಲಿತ ಚಳವಳಿಗೆ ಒಂದು ರಚನಾತ್ಮಕ ದಿಕ್ಕನ್ನು ಒದಗಿಸ ಬೇಕು. ಇದಕ್ಕೆ ಹೊಸತಕ್ತ, ಹೊಸ ಮನಸ್ಸು, ಜನರ ನೋವುಗಳ ನಡುವೆಯೇ ಅಂಬೇಡ್ಕರ್ ಅವರನ್ನು ಕಾಣುವ ಯುವಜನಾಂಗ ಮುಂದೆ ಬರಬೇಕು ಎಂದು ದಲಿತ ಚಿಂತಕ ಜಯನ್ ಮಲ್ಪೆಹೇಳಿದ್ದಾರೆ.

ಪಾಂಗಳದ ಅಂಬೇಡ್ಕರ್ ಭವನದ ಹೊರಾಂಗಣದಲ್ಲಿ ರವಿವಾರ ನಡೆದ ಅಂಬೇಡ್ಕರ್ ಯುವಸೇನೆಯ ನೂತನ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪ್ರಸ್ತುತ ದಲಿತ ಚಳವಳಿ ನಿದ್ರೆಯಲ್ಲಿ ಲೀನವಾಗಿದೆ. ಈ ನಾಟಕೀಯ ನಿದ್ರೆಯನ್ನು ತೊಲಗಿಸುವವರು ಯಾರು? ನಮ್ಮಲ್ಲಿಯೇ ಇಚ್ಛಾ ಶಕ್ತಿಯಿಲ್ಲ ದಿದ್ದರೆ ನಮಗಾಗಿ ಮತ್ತು ದಲಿತ ಸಮಾಜಕ್ಕಾಗಿ ನಾವು ಏನನ್ನೂ ಮಾಡಲಾರೆವು. ಗುರಿಯಿಲ್ಲದ ಹೋರಾಟಗಳಿಂದ ಯಾವ ಸಾಧನೆಯೂ ಆಗದು. ಯಾವುದೇ ಸಾಮಾಜಿಕ ಚಳವಳಿ ರಾಜಕೀಯದಿಂದ ಹೊರತಲ್ಲ. ವೈಚಾರಿಕ ಸ್ಪಷ್ಟತೆ,ಖಚಿತ ಆಲೋಚನೆ, ಪ್ರಮಾಣಿಕ ಮನಸ್ಸುಗಳು ಸೃಷ್ಟಿಯಾಗಬೇಕು ಎಂದರು.

ಕಾರ್ಯಕ್ರಮವನ್ನು ಪಾಂಗಾಳ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಸುಂದರ್ ಪಿ. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಾಜೇಶ್ ಆಚಾರ್ಯ, ದಲಿತ ಮುಖಂಡರಾದ ಹರೀಶ್ ಸಾಲ್ಯಾನ್, ಲೋಕೇಶ್ ಪಡುಬಿದ್ರಿ, ಗಣೇಶ್ ನೆರ್ಗಿ, ಸುಂದರ್ ಕಪ್ಪೆಟ್ಟು, ರಮೇಶ್ ಪಾಲ್, ರವಿ ಪಿ., ಅಶ್ವಿನಿ, ರಾಜೀವಿ ವಸಂತ, ಸಂತೋಷ್ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಅನಿಲ್ ಕುಮಾರ್ ಸ್ವಾಗತಿಸಿದರು. ದಿನೇಶ್ ವಂದಿಸಿದರು. ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News