ಜೋಳ-ಅಕ್ಕಿ- ರಾಗಿ ರೊಟ್ಟಿ ಜತೆ ಸಿಗಡಿ ಚಟ್ನಿ, ಉಪ್ಪಿನಕಾಯಿ!

Update: 2020-10-19 15:58 GMT

ಮಂಗಳೂರು, ಅ.19: ಕೊರೋನ ಸಂಕಷ್ಟದ ನಡುವೆ ಮಂಗಳೂರಿನ ಮೀನುಗಾರಿಕಾ ಕಾಲೇಜು ಕಡಿಮೆ ಖರ್ಚಿನಲ್ಲಿ ಪೌಷ್ಠಿಕ ಉತ್ಪನ್ನವನ್ನು ತಯಾರಿಸಿದೆ. ಜನಸಾಮಾನ್ಯರು, ಮಕ್ಕಳು, ವಲಸೆ ಕಾರ್ಮಿಕರು ಸೇರಿದಂತೆ ಮುಖ್ಯವಾಗಿ ಬಸ್ಸು ಹಾಗೂ ರೈಲ್ವೇ ಪ್ರಯಾಣಿಕರಿಗೆ ಪೌಷ್ಠಿಕ ಆಹಾರ ನೀಡುವ ಉದ್ದೇಶದಿಂದ ಜೋಳ, ಅಕ್ಕಿ ಹಾಗೂ ರಾಗಿ ರೊಟ್ಟಿ ಜತೆ ಪೌಷ್ಠಿಕ ಆಹಾರವಾದ ಮೀನಿನ ಉತ್ಪನ್ನವನ್ನು ಸಿದ್ಧಪಡಿಸಿದೆ.

ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಮೀನು ಪ್ರಿಯರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರ ಒದಗಿಸುವ ಈ 'ಮತ್ಸ ಸಿರಿ ಖಾದ್ಯ'ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಚಾಲನೆ ನೀಡಲು ಸಿದ್ಧತೆ ನಡೆದಿದೆ. ಕಾಂಬೋ ಪ್ಯಾಕ್‌ನಲ್ಲಿ ಅಕ್ಕಿ, ಜೋಳ ಹಾಗೂ ರಾಗಿ ರೊಟ್ಟಿ ಜತೆ ಸಿಗಡಿ ಚಟ್ನಿ ಹಾಗೂ ಸಿಗಡಿ ಉಪ್ಪಿನಕಾಯಿ ಹಾಗೂ ಮೀನಿನ ಚಿಪ್ಸ್ ಒಳಗೊಂಡಿರುತ್ತದೆ. ಪ್ರತ್ಯೇಕ ಪ್ಯಾಕೇಟ್ ಕೂಡಾ ಇರಲಿದೆ.

ಕೊರೋನ ಸಂದರ್ಭದಲ್ಲಿ ಪ್ರಯಾಣದ ವೇಳೆ ಸುರಕ್ಷಿತೆ ಹಾಗೂ ಆರೋಗ್ಯಕರ ಆಹಾರವನ್ನು ಕಡಿಮೆ ಖರ್ಚಿನಲ್ಲಿ ಒದಗಿಸಬೇಕೆಂಬ ನಿಟ್ಟಿನಲ್ಲಿ ಕಾಲೇಜಿನಿಂದ ಈ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಕರಾವಳಿ ಸೇರಿದಂತೆ ರಾಜ್ಯದ ಕೆಎಸ್‌ಆರ್‌ಟಿಸಿ ಹಾಗೂ ರೈಲ್ವೇ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಈ ಆಹಾರವನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ ರಾತ್ರಿ ವೇಳೆ ಪ್ರಯಾಣದ ವೇಳೆ ರೆಸ್ಟೋರೆಂಟ್, ಹೊಟೇಲ್‌ಗಳಿಗೆ ಹೋಗಲು ಹಿಂಜರಿಯುವವರೇ ಹೆಚ್ಚು. ವಲಸೆ ಕಾರ್ಮಿಕರು ಹಣದ ಜತೆಗೆ ಪೌಷ್ಠಿಕ ಆಹಾರದಿಂದಲೂ ವಂಚಿತರಾಗುತ್ತಿದ್ದಾರೆ. ಆ ಕಾರಣದಿಂದ ಪ್ಯಾಕೇಟೊಂದಕ್ಕೆ ಕನಿಷ್ಠ ದರದಲ್ಲಿ ದೊರೆಯಬಹುದಾದ ಈ ಉತ್ಪನ್ನ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಸೆಂಥಿಲ್ ವೇಲ್.

ಇದು ಮುಂದೆ ಗೃಹೋದ್ಯಮಕ್ಕೂ ಒತ್ತು ನೀಡಲಿದೆ. ಸದ್ಯ ಉದ್ಯೋಗದ ಜತೆಗೆ ಕಡಿಮೆ ಖರ್ಚಿನಲ್ಲಿ ಪೌಷ್ಠಿಕ ಆಹಾರವೂ ಅಗತ್ಯವಾಗಿದೆ. ಈಗಾಗಲೇ ಉಪ್ಪಿನಕಾಯಿ, ಚಟ್ನಿ ತಯಾರಿಕೆ ಮೀನುಗಾರಿಕಾ ಕಾಲೇಜು ವತಿಯಿಂದ ಮಾಡಲಾಗುತ್ತಿತ್ತು. ಇದೀಗ ರೊಟ್ಟಿಯ ಜತೆಗೆ ಈ ಉತ್ಪನ್ನವನ್ನು ತಯಾರು ಮಾಡಲಾಗುತ್ತಿದೆ.

ಅ. 21ರಂದು ಮುಖ್ಯಮಂತ್ರಿಯಿಂದ ಮಾರುಕಟ್ಟೆಗೆ
ಆಹಾರದ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಬಹುಮುಖ್ಯವಾಗಿರುವುದರಿಂದ ಸದ್ಯ ಕಾಲೇಜು ವತಿಯಿಂದ ಸೀಮಿತ ಪ್ರಮಾಣದಲ್ಲಿ ಉತ್ಪನ್ನ ತಯಾರು ನಡೆಸಲಾಗುತ್ತದೆ. ಕಾಲೇಜು ಸಿದ್ಧಪಡಿಸಿದ ಈ ಖಾದ್ಯವನ್ನು ಕೆಎ್ಡಿಸಿ ಮಾರುಕಟ್ಟೆಗೆ ಪರಿಚಯಿಸಲಿದೆ. ಕೆಎಫ್‌ಡಿಸಿಯ 40 ಔಟ್‌ಲೆಟ್‌ಗಳಿಗೆ ಮೀನುಗಾರಿಕಾ ಕಾಲೇಜಿನಿಂದ ಈ 'ಮತ್ಸ್ಯ ಸಿರಿ ಖಾದ್ಯ' ಸರಬರಾಜು ಮಾಡಲಾಗುವುದು. ಅ. 21ರಂದು ಮುಖ್ಯಮಂತ್ರಿಯವರು ಈ ಖಾದ್ಯವನ್ನು ಮಾರುಕಟ್ಟೆಗೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಿದ ಬಳಿಕ ಒಂದು ವಾರದ ಅವಧಿಯಲ್ಲಿ ಎಲ್ಲಾ ರೀತಿಯ ಪ್ರಕ್ರಿಯೆಗಳು ಮುಗಿದು ಕೆಎಫ್‌ಡಿಸಿಯ ಮಳಿಗೆಗಳಿಗೆ ಉತ್ಪನ್ನದ ಪ್ಯಾಕೇಟ್‌ಗಳು ಸರಬರಾಜುಗೊಂಡು ಜನಸಾಮಾನ್ಯರಿಗೆ ಲಭ್ಯವಾಗಲಿದೆ.
* ಡಾ. ಸೆಂಥಿಲ್ ವೇಲ್, ಡೀನ್, ಮಂಗಳೂರು ಮೀನುಗಾರಿಕಾ ಕಾಲೇಜು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News