ಹಾಪ್ಕಾಮ್ಸ್ ಅಧ್ಯಕ್ಷರಾಗಿ ಸೀತಾರಾಮ ಗಾಣಿಗ
ಉಡುಪಿ, ಅ.20: ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ ನಿ. (ಹಾಪ್ಕಾಮ್ಸ್) ಇದರ ನೂತನ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬೆಂಬಲಿತ ನಿರ್ದೇಶಕ ಸೀತಾರಾಮ ಗಾಣಿಗ ಹಾಲಾಡಿ ಹಾಗೂ ಉಪಾಧ್ಯಕ್ಷರಾಗಿ ವಿನಯ ರಾನಡೆ ಮಾಳ ಇವರು ಚುನಾಯಿತರಾಗಿದ್ದಾರೆ.
ಸೀತಾರಾಮ ಗಾಣಿಗ ಇವರು ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ರೈತಪರ ಹೋರಾಟಗಳ ಮೂಲಕ ಹಾಪ್ಕಾಮ್ಸ್ನ ನಿರ್ದೇಶಕರಾದವರು.
ಜಿಲ್ಲೆಯ ರೈತರ ತರಕಾರಿ ಹಣ್ಣುಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಉತ್ತಮ ವೌಲ್ಯ ಕೊಡಿಸುವ ನಿಟ್ಟಿನಲ್ಲಿ ಹಾಪ್ಕಾಮ್ಸ್ ಮೂಲಕ ಹೆಚ್ಚಿನ ಪ್ರಯತ್ನ ನಡೆಸುವ ಭರವಸೆಯನ್ನು ಅಧ್ಯಕ್ಷರು ನೀಡಿದ್ದಾರೆ. ಭಾಕಿಸಂನ ಸದಸ್ಯರ ಆಯ್ಕೆ ರೈತ ವಲಯದಲ್ಲಿ ಹಾಪ್ಕಾಮ್ಸ್ ಬಗ್ಗೆ ಆಶಾ ಭಾವನೆ ಮೂಡಿಸಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.