ಬಂಟ್ವಾಳ : ಮೆಲ್ಕಾರ್ ನಲ್ಲಿ ಯುವಕನ ಕೊಲೆ

Update: 2020-10-23 16:57 GMT

ಬಂಟ್ವಾಳ, ಅ.23: ರೌಡಿ ಶೀಟರ್, ನಟ ಸುರೇಂದ್ರ ಬಂಟ್ವಾಳ್ ಅವರ ಹತ್ಯೆ ನಡೆದ ಎರಡು ದಿನಗಳ ನಂತರ ಬಂಟ್ವಾಳದಲ್ಲಿ ಮತ್ತೋರ್ವ ರೌಡಿ ಶೀಟರ್ ನನ್ನು ತಂಡವೊಂದು ಮಾರಕ ಆಯುಧಗಳಿಂದ ಕಡಿದು ಹತ್ಯೆ ನಡೆಸಿರುವ ಘಟನೆ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. 

ಕಲ್ಲಡ್ಕ ನಿವಾಸಿ ಉಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ (28) ಕೊಲೆಯಾದ ಯುವಕ. 

ಉಮರ್ ಫಾರೂಕ್ ಕಲ್ಲಡ್ಕದಿಂದ ಬೈಕ್ ನಲ್ಲಿ ನಂದಾವರ ಕಡೆಗೆ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಉಮರ್ ಫಾರೂಕ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

ಈತನ ಆಪ್ತ ಸ್ನೇಹಿತರಾಗಿದ್ದವರೇ ಕೊಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಉಮರ್ ಫಾರೂಕ್ ಮತ್ತು ಮೂಲತಃ ಕಲ್ಲಡ್ಕದ, ಪ್ರಸಕ್ತ ನಂದಾರ್ ನಲ್ಲಿ ವಾಸವಿರುವ ಮತ್ತೋರ್ವ ರೌಡಿ ಶೀಟರ್ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಕೆಲವು ಸಮಯದಿಂದ ಇಬ್ಬರ ನಡುವೆ ವೈಮನಸು ಉಂಟಾಗಿ ಮುನಿಸಿಕೊಂಡಿದ್ದರು ಎನ್ನಲಾಗಿದೆ. ಇಬ್ಬರ ನಡುವೆಯೂ ಆಗಾಗ ಮೊಬೈಲ್ ಫೋನಿನ ಮೂಲಕ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಉಮರ್ ಫಾರೂಕ್ ನಂದಾವರದಲ್ಲಿರುವ ಸ್ನೇಹಿತನಾಗಿದ್ದ ರೌಡಿ ಶೀಟರ್ ನ ತಂದೆಯ ಹೊಟೇಲ್ ಗೆ ಹೋಗಿ ನಿಮ್ಮ‌ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ರೌಡಿ ಶೀಟರ್ ಇಂದು ಸಂಜೆ ಉಮರ್ ಫಾರೂಕ್ ಗೆ ಕರೆ ಮಾಡಿ ನಂದಾವರಕ್ಕೆ ಬರುವಂತೆ ಕರೆದಿದ್ದ. ಅದರಂತೆ ಕಲ್ಲಡ್ಕದಿಂದ ಮೆಲ್ಕಾರ್ ಆಗಿ ನಂದಾವರಕ್ಕೆ ತೆರಳುತ್ತಿದ್ದ ಉಮರ್ ಫಾರೂಕ್ ನನ್ನು ಮೆಲ್ಕಾರ್ ಬಳಿ ಕಾರಿನಲ್ಲಿ ಕಾದು ಕುಳಿತಿದ್ದ ರೌಡಿ ಶೀಟರ್ ನ ತಂಡ ಉಮರ್ ಫಾರೂಕ್ ನನ್ನು ಹಿಂಬಾಲಿಸಿ ಮೆಲ್ಕಾರ್ ಗೆ ಸ್ವಲ್ಪ ಮುಂದೆ ಬೋಗೋಡಿ ಎಂಬಲ್ಲಿ ದಾಳಿ ನಡೆಸಿ ಹತ್ಯೆ ನಡೆಸಿದೆ ಎನ್ನಲಾಗಿದೆ.

ಉಮರ್ ಫಾರೂಕ್ ತೆರಳುತ್ತಿದ್ದ ಬೈಕ್ ಗೆ ಕಾರಿನಿಂದ ಢಿಕ್ಕಿ ಹೊಡೆಸಿ ಅಪಘಾತ ನಡೆಸಿದ ಬಳಿಕ ತಂಡ ಉಮರ್ ಫಾರೂಕ್ ಮೇಲೆ ತಲವಾರಿನಿಂದ ಕಡಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಉಮರ್ ಫಾರೂಕ್ ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅವಿವಾಹಿತನಾಗಿರುವ ಉಮರ್ ಫಾರೂಕ್ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಆರೋಪಿ ಕೇಶವ್ ಗೌಡಾ ಕೊಲೆ ಯತ್ನ ಪ್ರಕರಣ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ. ಉಮರ್ ಫಾರೂಕ್ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು ರೌಡಿ ಶೀಟರ್ ಆಗಿದ್ದಾನೆ.

ಘಟನೆ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News