ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು: ಶ್ಯಾಮಲ ಕುಂದರ್

Update: 2020-10-23 13:58 GMT

ಉಡುಪಿ, ಅ.23: ಮಹಿಳೆಯರು ಮತ್ತು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ, ಸ್ವ-ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಗಳನ್ನಾಗಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಕುಂದರ್ ಹೇಳಿದರು.

ಶುಕ್ರವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸರಕಾರವು ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳು ಪ್ರತಿಶತ 100ರಷ್ಟು ಅನುಷ್ಠಾನ ಗೊಳ್ಳಬೇಕು ಎಂದವರು ತಿಳಿಸಿದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳು ತಮಗಾದ ಅನ್ಯಾಯದ ಕುರಿತಂತೆ ದೂರನ್ನು ಯಾವ ಪ್ರಾಧಿಕಾರಕ್ಕೆ ನೀಡಬೇಕೆಂಬ ಬಗ್ಗೆ ಅರಿವು ಮೂಡಿಸಬೇಕು. ಅವರಿಗೆ ಸಾಂತ್ವನ ಹೇಳುವುದರ ಜೊತೆಗೆ ಧೈರ್ಯ ತುಂಬಿ ಕಾನೂನಿನ ನೆರವನು್ನ ಒದಗಿಸಬೇಕು ಎಂದು ಹೇಳಿದರು.

ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯಲು ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಅಂತರಿಕ ದೂರು ಸಮಿತಿಗಳನ್ನು ರಚಿಸಬೇಕು. ಈ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಬೇಕು ಎಂದರು.

ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳು, ವಲಸೆ ಮಹಿಳೆಯರು, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ಅವರು ಶ್ಲಾಸಿದರು. ಸೈಬರ್ ಕ್ರೈಮ್ ಕುರಿತಂತೆ ಮಹಿಳೆಯರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಬೇಕು ಮತ್ತು ಈ ರೀತಿಯ ಅಪರಾಧಗಳಿಗೆ ಬಲಿಯಾಗದಂತೆ ಹೇಗೆ ಪಾರಾಗಬೇಕು ಎಂಬ ಬಗ್ಗೆ ಕಿರುಪುಸ್ತಕ ಮುದ್ರಿಸಿ ವಿತರಿಸಬೇಕು. ಮಾದಕ ವಸ್ತುಗಳಿಗೆ ವಿದ್ಯಾರ್ಥಿನಿಯರು ಬಲಿಯಾಗ ದಂತೆ ಅರಿವು ಕಾರ್ಯಕ್ರಮಗಳು ಮತ್ತು ಪೊಲೀಸ್ ಇಲಾಖೆಯಿಂದ ಹೆಚ್ಚಿನ ತಪಾಸಣೆ ನಡೆಸಬೇಕು ಎಂದರು.

ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಕಳೆದ ಡಿ.19ರಿಂದ ಆಗಸ್ಟ್‌ವರೆಗೆ 28 ಪ್ರಕರಣಗಳು ದಾಖಲಾಗಿದ್ದು, 16 ಪ್ರಕರಣ ಇತ್ಯರ್ಥಗೊಂಡಿವೆ. ಏಳು ನ್ಯಾಯಾಲಯ ಹಂತದಲ್ಲಿ ಮತ್ತು ಒಂದು ಸಮಾಲೋಚನೆ ಹಂತದಲ್ಲಿದೆ ಎಂದರು.

ಕೌಟುಂಬಿಕ ದೌರ್ಜನ್ಯ ಸಂರಕ್ಷಣೆ ಕಾಯ್ದೆಯಡಿ 2020-21ರಲ್ಲಿ 8 ಪ್ರಕರಣ ಗಳು ದಾಖಲಾಗಿದ್ದು 5 ಪ್ರಕರಣಗಳು ಸಮಾಲೋಚನೆಯಿಂದ ಇತ್ಯರ್ಥ ಗೊಂಡಿವೆ. ಮೂರು ಪ್ರಕರಣಗಳು ಬಾಕಿ ಇವೆ. ಅಭಯ ನಿಧಿಯಡಿ ಒಂದು ಪ್ರಕರಣದಲ್ಲಿ 25,000 ಮತ್ತು 2 ಪ್ರಕರಣದಲ್ಲಿ ತಲಾ 5,000ರೂ.ನಂತೆ ಪರಿಹಾರ ವಿತರಿಸಲಾಗಿದೆ. ಮಾತೃ ವಂದನ ಯೋಜನೆಯಡಿ ಇದುವರೆಗೆ 23,865 ಫಲಾನುಭವಿಗಳಿಗೆ 10.20 ಕೋಟಿರೂ. ವೆಚ್ಚ ಮಾಡಿದ್ದು, ಈ ವರ್ಷ ಇದುವರೆಗೆ 4286 ಫಲಾನುಭಗಳಿಗೆ 1.54 ಕೋಟಿ ನೀಡಲಾಗಿದೆ ಎಂದರು.

ಸಭೆಯಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News