ಉಡುಪಿ: ಯುವತಿ ಆತ್ಮಹತ್ಯೆ

Update: 2020-10-26 11:24 GMT

ಉಡುಪಿ, ಅ.26: ಹಿರಿಯಡ್ಕದ ಯುವತಿಯೊಬ್ಬಳು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.24ರಂದು ಅಂಬಾಗಿಲಿನಲ್ಲಿ ನಡೆದಿದೆ.

ಹಿರಿಯಡ್ಕ ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್(19) ಆತ್ಮಹತ್ಯೆ ಮಾಡಿಕೊಂಡವರು. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವಿವಾಹಿತ ಯುವಕನೊಂದಿಗಿನ ಪ್ರೇಮ ಸಂಬಂಧದ ವಿಚಾರವಾಗಿ ನೊಂದು ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಿತಾರಿಗೆ ಕೆಲವು ಸಮಯಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಜಡ್ಕಲ್ ಮೂಲದ, ಸದ್ಯ ಉಪ್ಪೂರಿನಲ್ಲಿ ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಪ್ರಶಾಂತ್ ಕುಂದರ್(24) ಎಂಬಾತನ ಪರಿಚಯವಾಗಿತ್ತೆನ್ನಲಾಗಿದೆ. ಬಳಿಕ ಪ್ರಶಾಂತ್‌ನ ಪ್ರೀತಿಯ ಬಲೆಗೆ ಬಿದ್ದ ರಕ್ಷಿತಾ, ಆತನಿಗೆ ವಿವಾಹವಾಗಿರುವ ವಿಚಾರ ತಿಳಿಯುತ್ತಲೇ ಆತನಿಂದ ದೂರವಾಗಿದ್ದಳು. ಬಳಿಕ ಪ್ರಶಾಂತ್ ಆಕೆಯನ್ನು ಮನವೊಲಿಸಿದ್ದು, ಇವರ ಪ್ರೇಮ ಸಂಬಂಧ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಶಾಂತ್ ಇಂಟಿಯರ್ ಡಿಸೈನರ್ ಆಗಿದ್ದರೆ, ರಕ್ಷಿತಾ ಮಣಿಪಾಲದಲ್ಲಿರುವ ಸಂಸ್ಥೆಯೊಂದರಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದರು. ಲಾಕ್‌ಡೌನ್ ಸಂದರ್ಭದಲ್ಲಿ ಉಡುಪಿಯ ಹೊಟೇಲಿನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರಿಗೆ ಸುಳ್ಳು ಹೇಳಿದ್ದ ರಕ್ಷಿತಾ, ಕಳೆದ 3-4 ತಿಂಗಳಿನಿಂದ ಉಡುಪಿಯ ಅಂಬಾಗಿಲಿನಲ್ಲಿ ರೂಮ್ ಮಾಡಿಕೊಂಡು ವಾಸವಿದ್ದರು. ಆಕೆ, ವ್ಯವಹಾರದಲ್ಲಿ ಪ್ರಶಾಂತ್‌ಗೆ ತುಂಬಾ ಸಹಾಯ ಮಾಡುತ್ತಿದ್ದರೆನ್ನಲಾಗಿದೆ. ಈ ಮಧ್ಯೆ ರಕ್ಷಿತಾ ಕುಟುಂಬ ತೊರೆದು ತನ್ನ ಜೊತೆ ಜೀವನ ಮಾಡುವಂತೆ ಪ್ರಶಾಂತ್‌ಗೆ ಒತ್ತಾಯ ಮಾಡುತ್ತಿದ್ದಲೆನ್ನಲಾಗಿದೆ. ಇದೇ ವಿಚಾರದಲ್ಲಿ ಅ.24ರಂದು ಪ್ರಶಾಂತ್‌ಗೆ ಕರೆ ಮಾಡಿದ್ದ ರಕ್ಷಿತಾ ಮತ್ತೆ ಒತ್ತಡ ಹಾಕಿದ್ದರೆನ್ನಲಾಗಿದೆ. ಇದಕ್ಕೆ ಆತ ಒಪ್ಪದಿದ್ದಕ್ಕೆ ಇದು ಕೊನೆಯ ಕರೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದರೆನ್ನಲಾಗಿದೆ.

ಇದರಿಂದ ಗಾಬರಿಗೊಂಡ ಪ್ರಶಾಂತ್ ರಕ್ಷಿತಾರ ರೂಮಿಗೆ ತೆರಳಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು. ಈ ವೇಳೆ ಪ್ರಶಾಂತ್ ಹಿಂಬಾಗಿಲು ಮುರಿದು ಒಳಪ್ರವೇಶಿಸಿದಾಗ ರಕ್ಷಿತಾ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆನ್ನಲಾಗಿದೆ. ಕೂಡಲೇ ಆಕೆಯನ್ನು ಕೆಳಗಿಳಿಸಿ, ರಿಕ್ಷಾದಲ್ಲಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದನು. ಆದರೆ ಅಲ್ಲಿ ಆಕೆ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಪ್ರಶಾಂತ್ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ರಕ್ಷಿತಾರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಮನೆಮಂದಿ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು,. ಅದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಪ್ರಶಾಂತ್‌ನನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಸಾವಿನ ಕಾರಣವು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News