ಗೇರುಬೀಜ ಕಾರ್ಖಾನೆಯಲ್ಲಿ ಕಳವಿಗೆ ಯತ್ನ

Update: 2020-10-26 15:58 GMT

ಬ್ರಹ್ಮಾವರ, ಅ.26: ಸೂರಾಲು ರಸ್ತೆಯ ಕೆಳ ಕರ್ಜೆಯಲ್ಲಿರುವ ವಿನಾಯಕ ಗೇರುಬೀಜ ಕಾರ್ಖಾನೆಯಲ್ಲಿ ಅ.25ರಂದು ರಾತ್ರಿ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.

ಮೇಲ್ಕರ್ಜೆಯ ಗೋಪಾಲ ನಾಯ್ಕ ಎಂಬವರ ಕಾರ್ಖಾನೆಯ ಬಾಗಿಲನ್ನು ಕಳ್ಳರು, ಬಲತ್ಕಾರದಿಂದ ಮೀಟಿ ಮೇಲೆತ್ತಿ ಒಳನುಗ್ಗಿದ್ದರೆನ್ನಲಾಗಿದೆ. ಆದರೆ ಅಲ್ಲಿ ಯಾವುದೇ ವಸ್ತುಗಳು ಕಳವು ಆಗಿರುವುದು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ. ಆದರೆ ಕೆಲವು ಬಟ್ಟೆ ಬರೆ ಪ್ಲಾಸ್ಟಿಕ್ ಚೀಲ, ಬ್ಯಾಟರಿ, ನೀರಿನ ಬಾಟಲಿ ಕಂಡು ಬಂದಿದೆ.

ಈ ಬಗ್ಗೆ ಸ್ಥಳೀಯರು ಹುಡುಕಾಡಿದಾಗ ಕಾರ್ಖಾನೆಯ 200ಮೀ ದೂರ ದಲ್ಲಿ ಹಾಡಿಬೆಟ್ಟು ರಸ್ತೆ ಬದಿಯಲ್ಲಿ ಸ್ವೀಫ್ಟ್ ಕಾರು ಸಂಶಯಾಸ್ಪದ ರೂಪದಲ್ಲಿ ನಿಂತಿರುವುದು ಕಂಡುಬಂದಿದೆ. ಇಂದು ಅದನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News