'ಗೋ ಕೊರೋನ' ಘೋಷಣೆ ಮೊಳಗಿಸಿದ್ದ ಅಠಾವಳೆಗೆ ಕೊರೋನ ಪಾಸಿಟಿವ್
Update: 2020-10-27 12:46 GMT
ಮುಂಬೈ, ಅ.27: ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಇಲಾಖೆಯ ಸಹಾಯಕ ಸಚಿವ ರಾಮದಾಸ ಅಠಾವಳೆಗೆ ಮಂಗಳವಾರ ಕೊರೋನ ಸೋಂಕು ದೃಢಪಟ್ಟಿದ್ದು ಅವರನ್ನು ದಕ್ಷಿಣ ಮುಂಬೈಯ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 20ರಂದು ಗೇಟ್ವೇ ಆಫ್ ಇಂಡಿಯಾ ಬಳಿ ನಡೆದಿದ್ದ ಕಾರ್ಯಕ್ರಮದಲ್ಲಿ ಚೀನಾ ದೂತಾವಾಸದ ಅಧಿಕಾರಿ ಹಾಗೂ ಬೌದ್ಧ ಸನ್ಯಾಸಿಗಳ ಜತೆ ಪಾಲ್ಗೊಂಡಿದ್ದ ಅಠಾವಳೆ, ಪ್ರಾರ್ಥನೆಯ ಸಂದರ್ಭದಲ್ಲಿ ‘ತೊಲಗು ಕೊರೋನ, ತೊಲಗು’ ಎಂಬ ಮಂತ್ರ ಪಠಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೋಮವಾರ ಮುಂಬೈಯಲ್ಲಿ ನಟಿ ಪಾಯಲ್ ಘೋಷ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅಠಾವಳೆ ಪಾಲ್ಗೊಂಡಿದ್ದರು. 60 ವರ್ಷದ ಅಠಾವಳೆ ಮಧುಮೇಹ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ ಎಂದು ಅವರ ನಿಕಟವರ್ತಿ ಹೇಳಿದ್ದಾರೆ.