ಚೇರ್ಕಾಡಿ ಗೇರುಬೀಜ ಕಾರ್ಖಾನೆಯಲ್ಲಿ ಲಕ್ಷಾಂತರ ರೂ.ವೌಲ್ಯದ ಗೇರುಬೀಜ ಕಳವು
ಬ್ರಹ್ಮಾವರ, ಅ.27: ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಎಂಬಲ್ಲಿರುವ ವಿಜಯದುರ್ಗಾ ಗೇರುಬೀಜ ಕಾರ್ಖಾನೆಯಲ್ಲಿ ಅ.21ರಿಂದ 26ರ ನಡುವಿನ ಅವಧಿಯಲ್ಲಿ ಸುಮಾರು 1.4 ಲಕ್ಷ ರೂ. ಮೌಲ್ಯದ 320 ಕೆ.ಜಿ. ಗೇರುಬೀಜ ವನ್ನು ಕಳವು ಮಾಡಿರುವುದಾಗಿ ಕಾರ್ಖಾನೆಯ ಮಾಲಕ ಕರ್ಜೆ, ಹೊಸೂರು ಗ್ರಾಮದ ರಾಮಕೃಷ್ಣ ಶ್ಯಾನುಭೋಗ್ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಕಾರ್ಖಾನೆಯಲ್ಲಿ ಕಚ್ಛಾ ಗೇರುಬೀಜವನ್ನು ಖರೀದಿಸಿ ಅದನ್ನು ಸಂಸ್ಕರಿಸಿ ತಲಾ 10 ಕೆ.ಜಿ. ತೂಗುವ ಡಬ್ಬಗಳಲ್ಲಿ ತುಂಬಿಸಿ ಶೀಲ್ ಮಾಡಿ ಮಾರಾಟಕ್ಕಾಗಿ ಸ್ಟಾಕ್ ರೂಮ್ನಲ್ಲಿರಿಸಿದ್ದು, ಇದರಲ್ಲಿ 32 ಡಬ್ಬಗಳು ಕಾಣೆಯಾಗಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾರ್ಖಾನೆಯ ನೌಕರರಿಗೆ ಅ.21ರಿಂದ 26ರವರೆಗೆ ರಜೆ ನೀಡಿದ್ದು, ಇಂದು ಬೆಳಗ್ಗೆ ಬಂದು ಯಥಾಸ್ಥಿತಿಯಲ್ಲಿದ್ದ ಬೀಗವನ್ನು ತೆರೆದು ಕಾರ್ಖಾನೆ ಒಳಗೆ ಪರಿಶೀಲಿಸಿದಾಗ, ಕಳವು ಘಟನೆ ಬೆಳಕಿಗೆ ಬಂದಿದೆ ಎಂದು ಎಂದು ಶ್ಯಾನುಭೋಗ್ ಬ್ರಹ್ಮಾವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.