ಸರಕಾರಿ ನೌಕರರು ಲಂಚ ಕೇಳಿದರೆ ಮಾಹಿತಿ ನೀಡಿ : ಜಾಗೃತಿ ಅರಿವು ಸಪ್ತಾಹದಲ್ಲಿ ಡಿಸಿ ಡಾ.ರಾಜೇಂದ್ರ

Update: 2020-10-28 15:40 GMT

ಮಂಗಳೂರು, ಅ.28: ಸರಕಾರದ ಯೋಜನೆಗಳು ಸಮಾಜದ ಎಲ್ಲ ಜನರಿಗೂ ಸಮಾನವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಸರಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ಭ್ರಷ್ಟಾಚಾರ ರಹಿತ, ಪ್ರಾಮಾಣಿಕ, ನಿಷ್ಠೆಯಿಂದ ಸೇವೆ ಸಲ್ಲಿಸಬೇಕು. ಅಧಿಕಾರಿಗಳು ಹಣ ಅಪೇಕ್ಷಿಸಿದರೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ ಅರಿವು ಸಪ್ತಾಹ-2020ನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ನೆರವು ನೀಡುವ ಮಾಹಿತಿ ಕೈಪಿಡಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸರಕಾರಿ ಕಚೇರಿಗಳಲ್ಲಿ ಹಣದ ಅಪೇಕ್ಷೆ ಮಾಡಿದರೆ ಜೊತೆಗೆ ಇನ್ನಿತರ ಸಮಸ್ಯೆ ಎದುರಾದರೆ ಸಾರ್ವಜನಿಕರು ಈ ಮಾಹಿತಿ ಕೈಪಿಡಿಯ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಪ್ರಾಮಾಣಿಕತೆಯೊಂದಿಗೆ ಜೀವನ ನಡೆಸುವಂತೆ ಯುವ ಪೀಳಿಗೆಗೆ ಸ್ಫೂರ್ತಿ ತುಂಬುವುದರ ಮೂಲಕ ಬಹಳಷ್ಟು ಪ್ರಗತಿಯನ್ನು ಸಮಾಜ ಪಡೆಯಬಹುದು. ಅಧಿಕಾರಿಗಳು ಹಾಗೂ ಸಹದ್ಯೋಗಿಗಳು ಆಮಿಷಕ್ಕೆ ಒಳಗಾಗದೆ ಸಾರ್ವಜನಿಕರ ಹಿತಾಸಕ್ತಿಗನುಗುಣವಾಗಿ ನಿಸ್ವಾರ್ಥ ಸೇವೆ ನೀಡಿ ಆತ್ಮವಿಶ್ವಾಸ ಮೂಡಿಸುವಂತೆ ಕೆಲಸ ಮಾಡಬೇಕು. ಇದರಲ್ಲಿ ಲೋಪವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

‘ಜಾಗೃತ ಭಾರತ, ಸಮೃದ್ಧ ಭಾರತ’ ಶೀರ್ಷಿಕೆಯಡಿ ಅ.27ರಿಂದ ನ.2ರವರೆಗೆ ಆಚರಿಸಲಾಗುವ ಜಾಗೃತಿ ಅರಿವು ಸಪ್ತಾಹ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪಾ ಎ.ಜಿ. ಮಾತನಾಡಿ, ಪ್ರತಿಯೊಬ್ಬ ಸರಕಾರಿ ನೌಕರ ಕಾನೂನು ಪಾಲನೆ ಜೊತೆಗೆ, ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ಯಾವುದೇ ಸಾರ್ವಜನಿಕ ನೌಕರರು ನ್ಯಾಯಯುತವಾಗಿ ನಿರ್ವಹಿಸಬೇಕಾದ ಕೆಲಸಕ್ಕೆ ಲಂಚಕ್ಕೆ ಒತ್ತಾಯಿಸುವುದು, ಲಂಚ ಪಡೆಯುವುದು, ಲಂಚದ ರೂಪದಲ್ಲಿ ಬೇರೆ ಪ್ರತಿಫಲ ಪಡೆಯುವುದು, ಸಾರ್ವಜನಿಕ ಹುದ್ದೆಯನ್ನು ಬಳಸಿಕೊಂಡು ಇನ್ನಿತರ ಅವ್ಯವಹಾರಗಳನ್ನು ನಡೆಸುವುದು ಅಪರಾಧವಾಗುತ್ತದೆ ಎಂದರು.

ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ದೂರು ಇದ್ದಲ್ಲಿ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ (0824-2483000), ಪೊಲೀಸ್ ಅಧೀಕ್ಷಕರು (9480806231), ಪೊಲೀಸ್ ಇನ್‌ಸ್ಪೆಕ್ಟರ್ (9480806291) ಅವರನ್ನು ಸಂಪರ್ಕಿಸಿಬಹುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಐಎಎಸ್ ಪ್ರೊಬೆಷನರಿ ಅಧಿಕಾರಿ ಮೋನಾ ರೋತ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News