×
Ad

ನವೆಂಬರ್ ತಿಂಗಳಿಡೀ ಆಕಾಶ ಕೆಂಬಣ್ಣದ ಓಕುಳಿ !

Update: 2020-10-30 19:46 IST

ಉಡುಪಿ, ಅ. 30: ಇಡೀ ವರ್ಷದಲ್ಲೇ ಚೆಂದದ ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಈ ತಿಂಗಳಲ್ಲಿ ನೋಡಬಹುದಾಗಿದೆ. ಸೂರ್ಯಾಸ್ತವಂತೂ ಸುಂದರ ಕೆಂಬಣ್ಣದಿಂದ ಕೂಡಿರುತ್ತದೆ. ಸೂರ್ಯ ಕಣ್ಮರೆಯಾಗುವಾಗ ಇಡೀ ಆಕಾಶವೇ ಕೆಂಬಣ್ಣದ ಓಕುಳಿಯಂತೆ ಗೋಚರಿಸುತ್ತದೆ. ಮಳೆಗಾಲ ಮುಗಿದು ಚಳಿ ಪ್ರಾರಂಭದ ಆಕಾಶದ ವಾತಾವರಣವೇ ಈ ಭವ್ಯತೆಗೆ ಕಾರಣವಾಗಿದೆ ಎಂದು ಖ್ಯಾತ ಭೌತ ವಿಜ್ಞಾನಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.

ಈ ತಿಂಗಳು ಮಾತ್ರ ಆಕಾಶ ಇಷ್ಟೊಂದು ಕೆಂಬಣ್ಣದಲ್ಲಿ ಇರುತ್ತದೆ. ಮಳೆಗಾಲದಲ್ಲಿ ಈ ಚೆಂದ ಇರುವುದೇ ಇಲ್ಲ. ಆಕಾಶ ಕೇವಲ ಬಿಳಿಯಾ ಗಿರುತ್ತದೆ. ಹಾಗೆಯೆ ಫೆಬ್ರವರಿ, ಮಾರ್ಚ್, ಎಪ್ರಿಲ್, ಮೇ ತಿಂಗಳುಗಳಲ್ಲಿ ಇಷ್ಟು ಕೆಂಬಣ್ಣ ಇರುವುದಿಲ್ಲ. ಕೇವಲ ಹಳದಿ ಮಿಶ್ರಿತ ಸೌಮ್ಯ ಕೆಂಪು ಬಣ್ಣ ಇರುತ್ತದೆ ಎಂದು ಅವರು ಹೇಳುತ್ತಾರೆ.

ಸೆಪ್ಟೆಂಬರ್ ಕಾಲದಲ್ಲಿ ಸೂರ್ಯಾಸ್ತ, ಅರಿಶಿನ ಬಣ್ಣದಿಂದ ಕೂಡಿರುತ್ತದೆ. ಇಷ್ಟು ಮಾತ್ರವಲ್ಲ, ಆಶ್ವಿಜ, ಕಾರ್ತಿಕದ ಈ ಹುಣ್ಣಿಮೆಗಳ ಚಂದ್ರನಿಗೆ ಭವ್ಯ ವರ್ತುಲವೇರ್ಪಡಬಹುದು. ಅಲ್ಲದೇ ಈ ಕಾಲದಲ್ಲೇ ಅಪರಾಹ್ನದ ಸಮಯದಲ್ಲಿ ಸೂರ್ಯನಿಗೆ ಭವ್ಯ ವರ್ತುಲಾಕಾರದ ಕಾಮನಬಿಲ್ಲಿನ ಕೊಡೆಯನ್ನು ಆಗಾಗ ಕಾಣಬಹುದು ಎಂದವರು ವಿವರಿಸಿದರು.

ಇವೆಲ್ಲದಕ್ಕೂ ನಮ್ಮ ಭೂಮಿಯ ವಾತಾವರಣವೇ ಕಾರಣ. ತೇವ ಮಿಶ್ರಿತ ವಾತಾವರಣದಲ್ಲಿ ಸೂರ್ಯನ ಬೆಳಕು ಚೆದುರಿ, ಈ ಭವ್ಯತೆಯನ್ನು ಉಂಟು ಮಾಡುತ್ತದೆ. ಸಮುದ್ರ ತೀರದಲ್ಲಿ ಹಾಗೂ ಪಶ್ಚಿಮಘಟ್ಟದ ಎತ್ತರದ ಪ್ರದೇಶಗಳಲ್ಲಿ, ಈ ಕೆಲ ದಿನಗಳ ಪ್ರಶಾಂತ ಸಂಜೆ, ಆಕಾಶದಲ್ಲಿ ಹೊಸ ಹೊಸ ಚಿತ್ತಾರಗಳನ್ನು ಮೂಡಿಸಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ರಾತ್ರಿಯ ನೀಲಾಕಾಶದ ನಕ್ಷತ್ರಗಳೂ, ಈಗ ಬಲು ಚೆಂದವಾಗಿ ಕಾಣುತ್ತದೆ. ಈ ಎಲ್ಲಾ ಸೊಬಗು ನಮಗೆ ಭೂಮಿಯವರಿಗೆ ಮಾತ್ರ ನೋಡಲು ಸಿಗುತ್ತದೆ. ಬೇರೆ ಯಾವ ಗ್ರಹಗಳಲ್ಲೂ ಭೂಮಿಗಿರುವಂಥ ವಾತಾವರಣವಿಲ್ಲದೇ ಇರುವುದರಿಂದ ಈ ಬಣ್ಣದ ಚಿತ್ತಾರ ಇರುವುದಿಲ್ಲ. ಹೀಗಾಗಿ ಅಪರೂಪಕ್ಕೆ ಸಿಗುವ ಇಂಥ ಕಣ್ಮನ ಸೆಳೆಯುವ ಸೊಬಗನ್ನು ಎಲ್ಲರೂ ನೋಡಿ ಆನಂದಿಸಬೇಕು ಎಂದು ಡಾ.ಎ.ಪಿ.ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೋಬೆಲ್ ಪ್ರಶಸ್ತಿಗೂ ಇದೇ ಸ್ಪೂರ್ತಿ

ಆಕಾಶದಲ್ಲಿ ಮೂಡಿದ ಬಣ್ಣದೊಕುಳಿಯೇ ಭಾರತದ ಮಹಾನ್ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಸಂಶೋಧನೆಗೆ ಸ್ಪೂರ್ತಿಯಾಗಿದ್ದು, ಈ ಬಣ್ಣದ ಚಿತ್ತಾರ ಅವರ ಹೊಸ ಹೊಸ ಚಿಂತನೆಗೆ ಕಾರಣವಾಯಿತು. ಇದೇ ಅವರ ನೋಬೆಲ್ ಪ್ರಶಸ್ತಿಗೂ ಮೂಲ ಕಾರಣವಾಯಿತು ಎಂದು ಡಾ.ಎ.ಪಿ.ಭಟ್ ನುಡಿದರು.

ಅ.31ರ ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯವರೆಗೆ ಆಕಾಶ ಕೆಂಬಣ್ಣದಲ್ಲಿ ಗೋಚರಿಸಲಿದೆ. ಕೆಂಪಾದವೋ ಎಲ್ಲಾ ಕೆಂಪಾದವೋ ಎಂದು ಕವಿ ಹಾಡಿದಂತೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News