ವಿಟ್ಲ: ಅಂಗಡಿ ತೆರವಿಗೆ ತಂಡದಿಂದ ದಾಂಧಲೆ
Update: 2020-10-31 12:26 GMT
ಬಂಟ್ವಾಳ, ಅ. 31: ಅಂಗಡಿಯೊಂದಕ್ಕೆ ನುಗ್ಗಿದ ತಂಡವೊಂದು ಬಲವಂತವಾಗಿ ಅಂಗಡಿಯನ್ನು ತೆರವುಗೊಳಿಸಲು ಮುಂದಾಗಿದ್ದು ಈ ವೇಳೆ ಮಧ್ಯೆ ಪ್ರವೇಶಿಸಿದ ಸಾರ್ವಜನಿಕರ ಮೇಲೆಯೂ ಹಲ್ಲೆಗೆ ಮುಂದಾಗಿರುವ ಘಟನೆ ವಿಟ್ಲದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ಇರುವ ಶಂಕರ್ ನಾರಾಯಣ್ ಕಾರಂತ್ ಎಂಬವರ ಅಂಗಡಿಗೆ ಸುಮಾರು 20 ಮಂದಿ ಇದ್ದ ತಂಡ ಏಕಾಏಕಿ ನುಗ್ಗಿ ಅಂಗಡಿಯ ವಸ್ತುಗಳನ್ನು ಎಸೆದು ಬಲವಂತವಾಗಿ ಅಂಗಡಿಯ ತೆರವಿಗೆ ಮುಂದಾಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಥಳೀಯರ ಮೇಲೆಯೂ ತಂಡ ಹಲ್ಲೆಗೆ ಮುಂದಾಗಿದೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ತಂಡ ಸ್ಥಳದಿಂದ ಪರಾರಿಯಾಗಿದೆ.
ಈ ಘಟನೆ ಕುಟುಂಬವೊಂದರ ವ್ಯವಹಾರದ ವಿಚಾರದಿಂದ ನಡೆದಿದ್ದು ಇದಕ್ಕೆ ಸ್ಥಳೀಯ ಮೆಡಿಕಲ್ ಉದ್ಯಮಿಯೊಬ್ಬರ ಸಹಕಾರದಿಂದ ಅಂಗಡಿ ತೆರವುಗೊಳಿಸಲು ತಂಡ ಯತ್ನಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.