ರೋಚಕ ಘಟ್ಟ ತಲುಪಿದ ಐಪಿಎಲ್ 2020: ಯಾರಾಗಲಿದ್ದಾರೆ ಈ ಬಾರಿಯ ಚಾಂಪಿಯನ್ ?

Update: 2020-11-01 09:43 GMT

ದುಬೈ: ಈ ಬಾರಿ ವಿದೇಶದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಘಟ್ಟಕ್ಕೆ ತಲುಪಿದೆ. ಹಾಲಿ ಚಾಂಪಿಯನ್ ಮುಂಬೈ ಈಗಾಗಲೇ ಪ್ಲೇ-ಆಫ್‌ ಗೇರಿದ್ದು, ಚೆನ್ನೈ ಹೊರತುಪಡಿಸಿ ಉಳಿದೆಲ್ಲಾ ತಂಡಗಳಿಗೂ ಮುಂದಿನ ಪಂದ್ಯಗಳು ನಿರ್ಣಾಯಕವೆನಿಸಿವೆ. ಪ್ರತಿ ಬಾರಿಯೂ ಹಾಟ್ ಫೇವರಿಟ್ ಎನಿಸಿಕೊಳ್ಳುವ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಗುಳಿದಿದೆ.

ಹದಿಮೂರನೆ ಆವೃತ್ತಿಯ ಐಪಿಎಲ್ ನ ಲೀಗ್ ಹಂತದಲ್ಲಿ ಇದೀಗ ಕೇವಲ 4 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಪ್ಲೇ-ಆಫ್ ನ ಮೂರು ಸ್ಥಾನಕ್ಕಾಗಿ ಈಗಲೂ ಸ್ಪರ್ಧೆ ಮುಂದುವರಿದಿದೆ. 

ರವಿವಾರ ಅಬುಧಾಬಿ ಹಾಗೂ ದುಬೈನಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮಾಡು-ಮಡಿ ಪಂದ್ಯಗಳನ್ನು ಆಡಲಿವೆ

ಟೂರ್ನಿಯ ಮೊದಲ ಹಂತದಲ್ಲಿ ಮಿಂಚಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸತತ ಸೋಲಿನಿಂದ ಕಂಗೆಟ್ಟಿದ್ದು, ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿವೆ. ಡೆಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಸೋತರೆ, ಆರ್‌ಸಿಬಿ ಹ್ಯಾಟ್ರಿಕ್ ಸೋಲು ಕಂಡಿದೆ. ಮೊದಲ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಕೊನೆಯ ಹಂತದಲ್ಲಿ ಸತತ ಗೆಲುವು ದಾಖಲಿಸುತ್ತಿವೆ. ಕೋಲ್ಕತಾ ನೈಟ್ ರೈಡರ್ಸ್ ಆರಂಭದಿಂದಲೂ ಸಾಧಾರಣ ಪ್ರದರ್ಶನ ನೀಡುತ್ತಿದ್ದು, ಪ್ಲೇ ಆಫ್ ತಲುಪಲು ಇತರೆ ತಂಡಗಳೊಂದಿಗೆ ಪೈಪೋಟಿಗಿಳಿದಿದೆ.

ಮುಂಬೈ 'ಚಾಂಪಿಯನ್' ಆಟ: ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ ನಲ್ಲಿ ಪ್ಲೇ ಆಫ್‌ಗೇರಿದ ಮೊದಲ ಮತ್ತು ಏಕೈಕ ತಂಡವಾಗಿದ್ದು, ಪ್ರತೀ ವರ್ಷದಂತೆ ಈ ಬಾರಿಯೂ 'ಚಾಂಪಿಯನ್' ಆಟ ಆಡುತ್ತಿದೆ. ಚೆನ್ನೈ ಎದುರಿನ ಮೊದಲ ಪಂದ್ಯದಲ್ಲಿ ಸೋತರೂ ಕೂಡಾ ನಂತರ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಮುಂಬೈ ಯಶಸ್ವಿಯಾಗಿದೆ. ಒಟ್ಟು ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಈ ಬಾರಿಯೂ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, 5ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಎದುರು ನೋಡುತ್ತಿದೆ.

ಯುಎಇಯಲ್ಲಿ ಕೈಕೊಟ್ಟ ಚೆನ್ನೈ ಅದೃಷ್ಟ: ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಚೆನ್ನೈ ತಂಡ ಬಳಿಕ ಮೂರು ಬಾರಿ ಚಾಂಪಿಯನ್ ಆಗಿದೆ. ಒಟ್ಟು 8 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ತೋರಿರುವ ಚೆನ್ನೈ ಯಾವಾಗಲೂ ಪ್ಲೇಆಫ್‌ನಲ್ಲಿ ಸ್ಥಾನ ಪಡೆದ ಏಕೈಕ ತಂಡವಾಗಿಯೂ ಗುರುತಿಸಿಕೊಂಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಈ ಬಾರಿ ಯುಎಇಯಲ್ಲಿ ಅದೃಷ್ಟ ಕೈಕೊಟ್ಟಿದ್ದು, ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಗುಳಿದಿದೆ.

ಫೀನಿಕ್ಸ್ ನಂತೆ ಮೇಲೆ ಬಂದ ಪಂಜಾಬ್: ಟೂರ್ನಿಯ ಮೊದಲ ಹಂತದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆ.ಎಲ್ ರಾಹುಲ್ ನಾಯಕತ್ವದ ಪಂಜಾಬ್ ತಂಡವು ನಂತರ ಸತತ 5 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ. ಪಂಜಾಬ್ ಮೊದಲ 7 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರದ 5 ಪಂದ್ಯಗಳಲ್ಲಿ ಗೆದ್ದಿದ್ದು, ಸತತ 6ನೇ ಗೆಲುವಿನ ಹುಮ್ಮಸ್ಸಿನಲ್ಲಿದ್ದಾಗ ರಾಜಸ್ಥಾನ ಶಾಕ್ ನೀಡಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ.

ಪಂಜಾಬ್  ರವಿವಾರ ಚೆನ್ನೈ ವಿರುದ್ಧ ಮಾಡು-ಮಡಿ ಪಂದ್ಯವನ್ನು ಆಡಲಿದೆ.ಒಂದು ವೇಳೆ ಚೆನ್ನೈ ವಿರುದ್ದ ಜಯ ಸಾಧಿಸಿದರೆ ಪಂಜಾಬ್ ಗೆ ಪ್ಲೇ ಆಫ್ ಗೆ ಲಗ್ಗೆ ಇಡುವ ಉತ್ತಮ ಅವಕಾಶವಿದೆ. ಆದಾಗ್ಯೂ ಅಂತಿಮ ಲೀಗ್ ಪಂದ್ಯವನ್ನು ಗೆದ್ದ ಹೊರತಾಗಿಯೂ ಮುಂದಿನ ಸುತ್ತಿಗೆ ಅರ್ಹತೆ ಪಡೆಯದೇ ಇರುವ ಸನ್ನಿವೇಶವೂ ಇದೆ.

ನನಸಾಗುತ್ತಾ ಆರ್‌ಸಿಬಿಯ ಕನಸು: ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ನಂತಹ ಟಾಪ್ ಕ್ರಿಕೆಟಿಗರು ತಂಡದಲ್ಲಿದ್ದರೂ ಬೆಂಗಳೂರು ತಂಡ ಇದುವರೆಗೂ ಕಪ್ ಗೆಲ್ಲಲು ವಿಫಲವಾಗಿದೆ. 2009, 2011, 2016ರಲ್ಲಿ ಫೈನಲ್ ತಲುಪಿದ್ದರೂ, ಸೋತು ರನ್ನರ್ಸ್ ಅಪ್ ಆಗಿತ್ತು. ಆದರೆ ಪ್ರತೀ ಬಾರಿ ಪ್ರಶಸ್ತಿ ಗೆಲ್ಲಲು ವಿಫಲವಾದರೂ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯೊಂದಿಗೆ ಆರ್‌ಸಿಬಿ ಅಭಿಮಾನಿಗಳು ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಸ್ವತ: ವಿರಾಟ್ ಕೊಹ್ಲಿ ಸೇರಿ ಹಲವು ಆಟಗಾರರೂ ಕೂಡಾ 'ಈ ಸಲ ಕಪ್ ನಮ್ದೇ' ಎಂದು ಅಭಿಮಾನಿಗಳಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಇದೇ ವಿಶ್ವಾಸದಲ್ಲಿ ಕೊಹ್ಲಿ ಬಳಗ 2020ರ ಐಪಿಎಲ್ ಕಣಕ್ಕೆ ಇಳಿದಿದೆ. ಆದರೆ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಬಳಿಕ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ನಿರಾಶೆ ಮೂಡಿಸಿದೆ. ಆದರೂ ಪ್ಲೇ-ಆಫ್ ತಲುಪಲು ಅವಕಾಶವಿದ್ದು, ಈ ಬಾರಿಯಾದರೂ ಚಾಂಪಿಯನ್ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಆರ್ ಸಿಬಿ ಶಾರ್ಜಾದಲ್ಲಿ ಹೈದರಾಬಾದ್ ತಂಡದ ವಿರುದ್ಧ ಸೋತಿದೆ. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಸತತ ಮೂರನೇ ಸೋಲು ಕಂಡಿದೆ. ಹೈದರಾಬಾದ್ ತಂಡ ಕೇವಲ 14.2 ಓವರ್ ಗಳಲ್ಲಿ 121 ರನ್ ಗುರಿ ತಲುಪಿದ ಕಾರಣ ಆರ್ ಸಿಬಿ ರನ್ ರೇಟ್ ಗೆ ತೀವ್ರ ಹಿನ್ನಡೆಯಾಗಿದೆ. ಬೆಂಗಳೂರಿನ ಹಣೆಬರಹ ಅದರ ಕೈಯಲ್ಲಿದೆ. ಆರ್ ಸಿಬಿ ಸೋಮವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಜಯ ಸಾಧಿಸಿದರೆ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಲಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಉಳಿಸಿಕೊಳ್ಳಲಿದೆ.

ಒಂದು ವೇಳೆ ಡೆಲ್ಲಿ ವಿರುದ್ದ ಸೋತರೂ ಕೂಡ ಆರ್ ಸಿಬಿಗೆ ಪ್ಲೇ-ಆಫ್ ಗೆ ತಲುಪುವ ಅವಕಾಶವಿದೆ. ಡೆಲ್ಲಿ ವಿರುದ್ದ ಸೋತ ಹೊರತಾಗಿಯೂ ಆರ್ ಸಿಬಿ ಪ್ಲೇ-ಆಫ್ ಗೆ ತೇರ್ಗಡೆಯಾಗಬೇಕಾದರೆ ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ತಮ್ಮ ಅಂತಿಮ ಪಂದ್ಯಗಳನ್ನು ಸೋಲಬೇಕಾಗುತ್ತದೆ. ಪಂಜಾಬ್ ಹಾಗೂ ಹೈದರಾಬಾದ್ ತಂಡಗಳು ಆರ್ ಸಿಬಿಗಿಂತ ಉತ್ತಮ ರನ್ ರೇಟ್ ಹೊಂದಿವೆ.

ಡೆಲ್ಲಿಯ ಪರದಾಟ: ಹೆಚ್ಚಾಗಿ ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 2020ರ ಐಪಿಎಲ್ ಟೂರ್ನಿಯ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಪ್ಲೇ ಆಫ್ ತಲುಪುವ ಫೇವರಿಟ್ ತಂಡಗಳಲ್ಲಿ ಒಂದಾಗಿಯೂ ಗುರುತಿಸಿಕೊಂಡಿತ್ತು. ಮೊದಲ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗಿದ್ದ ಶ್ರೇಯಸ್ ಅಯ್ಯರ್ ಪಡೆ ಬಳಿಕ ಮಂಕಾಗಿದೆ. ಇದೀಗ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವ ತಂಡವು ಪ್ಲೇ ಆಫ್ ತಲುಪಲು ಎದುರು ನೋಡುತ್ತಿದ್ದು, ಇತರೆ ತಂಡಗಳೊಂದಿಗೆ ಪೈಪೋಟಿಗಿಳಿದಿದೆ. ಡೆಲ್ಲಿ ತಂಡ ಆರ್ ಸಿಬಿ ವಿರುದ್ದ ಜಯ ಸಾಧಿಸಿದರೆ,ಎರಡನೇ ಸ್ಥಾನದೊಂದಿಗೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆರ್ ಸಿಬಿ ವಿರುದ್ದ ಸೋತರೆ ಕೂಟದಿಂದ ಹೊರ ನಡೆಯುವುದು ಇಲ್ಲವೇ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆಯುವ ನಿರೀಕ್ಷೆ ಇದೆ.

ಮುಂಬೈ ಇಂಡಿಯನ್ಸ್: ಆಡಿರುವ 13 ಪಂದ್ಯಗಳಲ್ಲಿ 9ರಲ್ಲಿ ಜಯಗಳಿಸಿದೆ. ನಾಲ್ಕರಲ್ಲಿ ಸೋತಿದೆ. ತಂಡವು ಈಗಾಗಲೇ ಪ್ಲೇ ಆಫ್ ತಲುಪಿದ್ದು, ಐದನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಕಾತರವಾಗಿದೆ.

ಆರ್‌ಸಿಬಿ: ಆಡಿರುವ 13 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಜಯಿಸಿ 14 ಅಂಕಗಳನ್ನು ಪಡೆದಿದೆ. ಪ್ಲೇಆಫ್ ಹಂತ ಪ್ರವೇಶಿಸಲು ಉಳಿದ ಒಂದು ಪಂದ್ಯವನ್ನು ಗೆಲ್ಲಲೇಬೇಕಾಗುತ್ತದೆ. ಒಂದು ವೇಳೆ ಸೋತರೂ ರನ್ ರೇಟ್ ಆಧಾರದ ಮೇಲೆ ಪ್ಲೇಆಫ್ ತಲುಪಲು ಅವಕಾಶವಿದೆ.

ಡೆಲ್ಲಿ ಕ್ಯಾಪಿಟಲ್ಸ್: ಆಡಿರುವ 13 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಜಯಿಸಿ, 6 ಪಂದ್ಯಗಳಲ್ಲಿ ಸೋತಿದೆ. ಪ್ಲೇಆಫ್ ಹಂತ ಪ್ರವೇಶಿಸಲು ಕಾಯುತ್ತಿರುವ ತಂಡಕ್ಕೆ ಆರ್‌ಸಿಬಿ ಎದುರಿನ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾಗುತ್ತದೆ. ಒಂದು ವೇಳೆ ಸೋತರೂ ರನ್ ರೇಟ್ ಆಧಾರದ ಮೇಲೆ ಪ್ಲೇಆಫ್ ತಲುಪಲು ಅವಕಾಶವಿದೆ.

ಸನ್‌ರೈಸರ್ಸ್ ಹೈದರಾಬಾದ್: 13 ಪಂದ್ಯಗಳಿಂದ 6 ಗೆಲುವಿನೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿದೆ. ಉಳಿದ 1 ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು, ಸೋತರೆ ಪ್ಲೇಆಫ್ ಹಂತ ತಲುಪಲು ವಿಫಲವಾಗಲಿದೆ. ಹೈದರಾಬಾದ್ ನೆಟ್ ರನ್ ರೇಟ್ ಉತ್ತಮವಾಗಿದ್ದು, ಇದು ಹೈದರಾಬಾದ್ ಗೆ ಇರುವ ಏಕೈಕ ಪ್ಲಸ್ ಪಾಯಿಂಟ್ ಇದಾಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್: 13 ಪಂದ್ಯಗಳಿಂದ 6 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಚೆನ್ನೈ ಎದುರಿನ ಅಂತಿಮ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಹಾದಿ ಜೀವಂತವಾಗಿರಲಿದೆ. ಸೋತರೆ ಪ್ಲೇಆಫ್ ನಿಂದ ಹೊರಗುಳಿಯಲಿದೆ.

ರಾಜಸ್ಥಾನ ರಾಯಲ್ಸ್: ಆಡಿರುವ 13 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಜಯಿಸಿ 12 ಅಂಕಗಳನ್ನು ಪಡೆದಿದೆ. ಉಳಿದ 1 ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು, ಗೆದ್ದರೆ ಮಾತ್ರ ಪ್ಲೇಆಫ್ ರೇಸ್ ನಲ್ಲಿರಲಿದೆ.

ಕೋಲ್ಕತಾ ನೈಟ್ ರೈಡರ್ಸ್: ಒಟ್ಟು 13 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಗೆದ್ದು 7 ಪಂದ್ಯಗಳಲ್ಲಿ ಸೋತಿರುವ ಕೆಕೆಆರ್ ಗೆ ರಾಜಸ್ಥಾನ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಗೆಲುವು ಸಾಧಿಸಿದರೆ ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇಆಫ್ ತಲುಪಲು ಅವಕಾಶವಿದೆ.

ಚೆನ್ನೈ ಸೂಪರ್ ಕಿಂಗ್ಸ್: ಈ ಆವೃತ್ತಿಯಲ್ಲಿ ಇದುವರೆಗೆ 8 ಪಂದ್ಯಗಳನ್ನು ಕಳೆದುಕೊಂಡಿರುವ ಏಕೈಕ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಸಿಎಸ್‌ಕೆ ಪ್ಲೇ ಆಫ್ ನಿಂದ ಈಗಾಗಲೇ ಹೊರಗುಳಿದಿದ್ದು, ಪ್ರತಿಷ್ಠೆಗಾಗಿ ಮಾತ್ರವೇ ಆಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News