ಅಮ್ಮುಂಜೆ ಬಳಿ ಎರಡು ತಂಡಗಳ ಮಧ್ಯೆ ಹೊಡೆದಾಟ: ಓರ್ವನಿಗೆ ಚೂರಿ ಇರಿತ

Update: 2020-11-01 16:08 GMT

ಬ್ರಹ್ಮಾವರ, ನ.1: ಉಪ್ಪೂರು ಗ್ರಾಮದ ಅಮ್ಮುಂಜೆ ಎಂಬಲ್ಲಿ ಅ.31ರಂದು ರಾತ್ರಿ 11ಗಂಟೆ ಸುಮಾರಿಗೆ ಕ್ಷುಲ್ಲಕ ವಿಚಾರವಾಗಿ ಕುಡಿದ ಮತ್ತಿನಲ್ಲಿ ಎರಡು ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು, ಈ ವೇಳೆ ಒಂದು ತಂಡದ ಮೂರು ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಿರುವ ಬಗ್ಗೆ ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಸೂರಜ್ ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಾದ ನಾಗರಾಜ್, ರಮೇಶ್ ಪೂಜಾರಿ, ರಂಜು, ನೀತು ಎಂಬವರು ತಲೆಮರೆಸಿಕೊಂಡಿದ್ದಾರೆ. ಈ ಹೊಡೆದಾಟದಲ್ಲಿ ವಿಶಾಲ್ ಎಂಬವರು ಗಾಯಗೊಂಡಿದ್ದಾರೆ.

ಅಮ್ಮುಂಜೆಯ ಬಾಲಕೃಷ್ಣ, ವಿಶಾಲ್, ಪ್ರವೀಣ್, ಮಣಿಕಂಠ ಎಂಬವರು ಕೊಳಲಗಿರಿ ಬಾರ್‌ನಲ್ಲಿ ಮದ್ಯ ಸೇವಿಸಿ, ಬಳಿಕ ತಮ್ಮ ಮೂರು ದ್ವಿಚಕ್ರ ವಾಹನ ಗಳಲ್ಲಿ ಅಮ್ಮುಂಜೆ ಶಾಲೆಯ ಸಮೀಪ ಬರುತ್ತಿದ್ದಾಗ ಸೂರಜ್ ಹಾಗೂ ನಾಗ ರಾಜ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದರೆಂದು ದೂರಲಾಗಿದೆ. ಬಳಿಕ ಸೂರಜ್ ಉಳಿದ ಆರೋಪಿಗಳನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಸಿದ ಎನ್ನಲಾಗಿದೆ.

ಅಲ್ಲಿ ಆರೋಪಿಗಳ ತಂಡ ಬಾಲಕೃಷ್ಣ ತಂಡದ ಮೇಲೆ ಹಲ್ಲೆ ನಡೆಸಿ ಚೂರಿ ಯಲ್ಲಿ ಇರಿಯಲು ಬಂದಿದ್ದು, ಆಗ ಬಾಲಕೃಷ್ಣ ತಂಡದವರು ತಪ್ಪಿಸಿ ಕೊಂಡು ಪರಾರಿಯಾಗಲು ಯತ್ನಿಸಿದರು. ಈ ವೇಳೆ ವಿಶಾಲ್ ಚೂರಿ ಇರಿತದಿಂದ ಗಾಯಗೊಂಡರೆನ್ನಲಾಗಿದೆ. ಬಳಿಕ ಆರೋಪಿಗಳು, ಇವರು ಬಿಟ್ಟು ಹೋದ ದ್ವಿಚಕ್ರ ವಾಹನಗಳಿಗೆ ಬೆಂಕಿ ಕೊಟ್ಟು ಸುಟ್ಟು ಹಾಕಿದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News