ನಿತೀಶ್ ಕುಮಾರ್ ರತ್ತ ಈರುಳ್ಳಿ ಎಸೆದ ಘಟನೆ ಖಂಡಿಸಿದ ತೇಜಸ್ವಿ ಯಾದವ್
ಪಾಟ್ನಾ : ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ ಅವರ ಮೇಲೆ ಈರುಳ್ಳಿ ಎಸೆದ ಘಟನೆಯನ್ನು ಖಂಡಿಸಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಇತರ ವಿಧಾನಗಳಿವೆ ಎಂದು ಜನರಿಗೆ ನೆನಪಿಸಿದ್ದಾರೆ.
``ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಇಂತಹ ಘಟನೆ ನಡೆಯಬಾರದಿತ್ತು. ನಾವು ವಿಷಯಾಧರಿತವಾಗಿ ಹೋರಾಡುತ್ತಿರುವಾಗ ಇಂತಹ ಘಟನೆಗಳು ನನಗಿಷ್ಟವಿಲ್ಲ,'' ಎಂದು ತೇಜಸ್ವಿ ಹೇಳಿದ್ದಾರೆ.
``ಬಿಹಾರವು ನಿರುದ್ಯೋಗ, ವಲಸೆ ಮುಂತಾದ ವಿಚಾರಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ. ವಲಸಿಗ ಕಾರ್ಮಿಕರನ್ನು ಸರಕಾರ ಕಟುವಾಗಿ ನಡೆಸಿಕೊಂಡಿದೆ. ಅವರನ್ನು ಕ್ರಿಮಿನಲ್ ಎಂದೂ ಕರೆಯಲಾಗಿತ್ತು,'' ಎಂದು ತೇಜಸ್ವಿ ಹೇಳಿದರು.
``ಉದ್ಯೋಗ ನೀಡುವುದಾಗಿ ಬಿಹಾರ ಸರಕಾರ ಹೇಳಿಕೊಂಡಿದ್ದರೂ ಯಾರಿಗೂ ಕೆಲಸ ದೊರಕಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆಯೂ ಅವರು ಗಮನ ಹರಿಸಿಲ್ಲ, ಕೇಂದ್ರದ ಯಾವುದೇ ತಂಡ ಬಂದಿಲ್ಲ,'' ಎಂದ ತೇಜಸ್ವಿ ``ಮೂರನೇ ಹಂತದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುತ್ತಾರೆ. ನಿತೀಶ್ ಕುಮಾರ್ ಹೊರ ಹೋಗಬೇಕೆಂಬುದು ನಿರ್ಧಾರವಾಗಿದೆ,'' ಎಂದರು.