ಎಸ್ಸಿ, ಎಸ್ಟಿ ಕಾಯ್ದೆಯಡಿ ಎಲ್ಲ ಅವಮಾನಗಳು ಅಪರಾಧವಲ್ಲ: ಸುಪ್ರೀಂಕೋರ್ಟ್
Update: 2020-11-06 14:58 IST
ಹೊಸದಿಲ್ಲಿ:ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ)ಕಾಯ್ದೆ ಅಡಿ ದಲಿತ ಅಥವಾ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಗಳಿಗೆ ಮಾಡುವ ಎಲ್ಲ ಅವಮಾನಗಳು ಅಥವಾ ಬೆದರಿಕೆಗಳು ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ಗುರುವಾರ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂಬ ಕಾರಣಕ್ಕೆ ಅವಮಾನಗಳು ಅಥವಾ ಬೆದರಿಕೆಗಳನ್ನು ಒಡ್ಡಿದರೆ ಮಾತ್ರ ಕಾನೂನಿನಡಿಯಲ್ಲಿ ಅದು ಅಪರಾಧ ವಾಗುತ್ತದೆ.
ತನ್ನ ಮನೆಯಲ್ಲಿ ದಲಿತ ಮಹಿಳೆಯನ್ನು ನಿಂದಿಸಿದ ಕಾರಣಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ)ಕಾಯ್ದೆ ಅಡಿ ಪ್ರಕರಣ ಎದುರಿಸುತ್ತಿರುವ ಹಿತೇಶ್ ವರ್ಮಾ ಎಂಬುವವರು ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಾಲಯ ಗುರುವಾರ ವಿಚಾರಣೆ ನಡೆಸಿತು.