ಭಟ್ಕಳ ಪುರಸಭೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಪ್ರಥಮ ಆದ್ಯತೆ: ನೂತನ ಅಧ್ಯಕ್ಷ ಪರ್ವೇಝ್ ಕಾಶಿಂಜಿ
ಭಟ್ಕಳ, ನ.6: ಭಟ್ಕಳ ಪುರಸಭೆಯ ಆಡಳಿತವು ಹಳ್ಳಹಿಡಿದಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸರಿದಾರಿಗೆ ತರುವುದರ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲಾಗುವುದು ಎಂದು ಭಟ್ಕಳ ಪುರಸಭೆಯ ನೂತನ ಅಧ್ಯಕ್ಷ ಮುಹಮ್ಮದ್ ಪರ್ವೇಝ್ ಕಾಶಿಂಜಿ ಹೇಳಿದ್ದಾರೆ.
ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಭಟ್ಕಳದ ಜನರು ನನ್ನ ಮೇಲಿನ ವಿಶ್ವಾಸ, ನಂಬಿಕೆಯಿಂದ ಎರಡನೇ ಬಾರಿ ಪುರಸಭೆಯ ಅಧ್ಯಕ್ಷನಾಗುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಜನರ ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ದ್ರೋಹವೆಸಗದೆ ನನ್ನ ಅಧಿಕಾರದ ಮಿತಿ ಯೊಳಗೆ ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಭಟ್ಕಳದಲ್ಲಿ ಬಹಳಷ್ಟು ಕೆಲಸಕಾರ್ಯಗಳು ಬಾಕಿ ಇವೆ. ಅವುಗಳನ್ನು ಪೂರ್ಣಗೊಳಿಸುವಲ್ಲಿ ಹೆಚ್ಚು ಗಮನ ಕೇಂದ್ರೀಕರಿಸುವುದಾಗಿ ನುಡಿದ ಅವರು, ಹೊಸ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದರು.
ಎಡಿಬಿ ಯೋಜನೆಯಡಿ ನಿರ್ಮಿಸಲಾಗಿರುವ ಒಳಚರಂಡಿ ಕಾಮಾಗಾರಿಯಲ್ಲಿ ಕೆಲವೊಂದು ಲೋಪದೋಷಗಳು ಕಂಡುಬಂದಿದ್ದು, ಅದನ್ನು ಸರಿಪಡಿಸುವ ಪ್ರವಾಣಿಕ ಪ್ರಯತ್ನ ಮಾಡಲಾಗುವುದು.
ನಗರದ ಕೆಲ ಪ್ರದೇಶಗಳು ಎಡಿಬಿ ಒಳಚರಂಡಿ ಯೋಜನೆಯಿಂದ ಬಿಟ್ಟು ಹೋಗಿದ್ದು ಅದನ್ನು ಪುನರ್ಯೋಜಿಸಲು ಸರಕಾರ 115ಕೋಟಿ ರೂ. ಬಿಡುಗಡೆಗೊಳಿಸಿದೆ ಎಂದ ಅವರು, ನಗರದ ಒಳಚರಂಡಿ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ರೂಪಿಸಲಾಗುವುದು ಎಂದರು.