ಮುದರಂಗಡಿ ಕೆಳಗಿನ ಪೇಟೆ ವೃತ್ತದ ಐವನ್ ಡಿಸೋಜ ನಾಮಫಲಕ ತೆರವಿಗೆ ಲೋಕೋಪಯೋಗಿ ಇಲಾಖೆ ಸೂಚನೆ
Update: 2020-11-08 11:11 IST
ಪಡುಬಿದ್ರೆ, ನ.8: ಮುದರಂಗಡಿ ಕೆಳಗಿನಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಪೇಟೆಯನ್ನು ಅಭಿವೃದ್ಧಿಗೊಳಿಸಿ ವೃತ್ತವನ್ನು ನಿರ್ಮಿಸಲಾಗಿತ್ತು. ಆದರೆ ಮುದಂರಗಡಿ ಗ್ರಾಪನಿಂದ 'ಶ್ರೀ ಎಂಎಲ್ಸಿ ಐವನ್ ಡಿಸೋಜ ವೃತ್ತ' ಎಂಬ ನಾಮಫಲಕವನ್ನು ಅಳವಡಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸಾರ್ವಜನಿಕರು ನೀಡಿದ ದೂರಿನನ್ವಯ ಲೋಕೋಪಯೋಗಿ ಇಲಾಖೆಯು ಮುದರಂಗಡಿ ಗ್ರಾಪಂ ಪಿಡಿಓಗೆ ನೋಟಿಸ್ ನೀಡಿ ಈ ನಾಮಫಲಕವನ್ನು ತೆರವುಗೊಳಿಸುವಂತೆ ಸೂಚಿಸಿದೆ.
ನೋಟಿಸ್ ನೀಡಿ ತಿಂಗಳುಗಳು ಕಳೆದರೂ ನಾಮಫಲಕವು ಯಥಾಸ್ಥಿತಿಯಲ್ಲಿ ಮುಂದುವರಿದ ಕಾರಣ ಲೋಕೋಪಯೋಗಿ ಇಲಾಖೆ ಮತ್ತೆ ಗ್ರಾಪಂ ಪಿಡಿಓಗೆ ನೋಟಿಸ್ ನೀಡಿ ಐವನ್ ಡಿಸೋಜ ಹೆಸರಿನ ಫಲಕವನ್ನು ತೆಗೆಯುವಂತೆ ಸೂಚಿಸಿದೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಾಧಿಕಾರಿಗೆ ತಿಳಿಸಲಾಗುವುದು ಎಂಬ ಎಚ್ಚರಿಕೆಯನ್ನು ಸಹ ನೀಡಿದೆ.