ಅರ್ನಬ್ ಗೋಸ್ವಾಮಿ ಬೆಂಬಲಿಗರಿಂದ ‘ಬಿಜೆಪಿಗೆ ಭಾರತ ಉಗುಳುತ್ತಿದೆ’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್

Update: 2020-11-08 15:55 GMT

ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಇಂದು ನವಿ ಮುಂಬೈನ ತಲೋಜ ಸೆಂಟ್ರಲ್ ಜೈಲಿಗೆ ಮಹಾರಾಷ್ಟ್ರ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದಾಗ ಗೋಸ್ವಾಮಿ ಎರಡು ಕೈ ಜೋಡಿಸಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ವೀಡಿಯೊ ಹೊಸ ಚರ್ಚೆ ಹುಟ್ಟುಹಾಕಿದೆ. ಗೋಸ್ವಾಮಿ ತನ್ನನ್ನು ತಾನು ದುರ್ಬಲ ಎಂದು ಬಿಂಬಿಸಿಕೊಳ್ಳುವ ವಿಷಾದ ದೃಶ್ಯವನ್ನು ಕೆಲವರು ವ್ಯಂಗ್ಯವಾಡಿದರೆ, ಇನ್ನು ಕೆಲವರು ಗೋಸ್ವಾಮಿಯ ದೌರ್ಬಲ್ಯವನ್ನು ನಟಿ ರಿಯಾ ಚಕ್ರವರ್ತಿಗೆ ಹೋಲಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಗೋಸ್ವಾಮಿಯವರ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಗೋಸ್ವಾಮಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ಬಿಜೆಪಿ ಪರ್ ಥೂಕ್ತಾ ಹೈ ಭಾರತ್’’ (#बीजेपी_पर_थूकता_है_भारत) ಎಂಬ ಅರ್ನಬ್ ಗೋಸ್ವಾಮಿಯ ಬೆಂಬಲಿಗರ ಹ್ಯಾಶ್‌ಟ್ಯಾಗ್ ಭಾರೀ ಟ್ರೆಂಡ್ ಆಗುತ್ತಿದೆ.

ಗೋಸ್ವಾಮಿ ಬೆಂಬಲಿಗರು ಗೋಸ್ವಾಮಿಯವರ ಟಿವಿ ಚರ್ಚಾ ಕಾರ್ಯಕ್ರಮದ ಶೀರ್ಷಿಕೆ ‘ರಿಪಬ್ಲಿಕ್ ಭಾರತ್, ಪೂಚ್ತಾ ಹೈ ಭಾರತ್’ ನ್ನು ಎರವಲು ಪಡೆದು ‘ಬಿಜೆಪಿ ಪರ್ ತೂಕ್ತಾ ಹೈ ಭಾರತ್’(ಬಿಜೆಪಿಯ ಮೇಲೆ ಭಾರತ ಉಗುಳುತ್ತಿದೆ)ಎಂಬ ಹ್ಯಾಶ್‌ಟ್ಯಾಗ್ ನ್ನು ಟ್ರೆಂಡಿಂಗ್ ಮಾಡಿದ್ದಾರೆ.

ಗೋಸ್ವಾಮಿ ನ್ಯಾಯಾಂಗ ಕಸ್ಟಡಿಯಲ್ಲಿದ್ದಾಗ ಮೊಬೈಲ್ ಬಳಸುತ್ತಿರುವುದು ಕಂಡುಬಂದ ಕಾರಣ ಅವರನ್ನು ಮುಂಬೈ ಪೊಲೀಸರು ಇಂದು ತಲೋಜ ಜೈಲಿಗೆ ವರ್ಗಾಯಿಸಿದ್ದರು. ಈ ವೇಳೆ ತನ್ನ ಚಾನೆಲ್‌ನ ವರದಿಗಾರರೊಂದಿಗೆ ಮಾತನಾಡಿದ ಗೋಸ್ವಾಮಿ, "ನನಗೆ ಜೀವಬೆದರಿಕೆ ಇದೆ ಎಂದು ದೇಶದ ಜನರಿಗೆ ತಿಳಿಸುವೆ. ನನಗೆ ವಕೀಲರೊಂದಿಗೆ ಮಾತನಾಡಲು ಬಿಡುತ್ತಿಲ್ಲ''ಎಂದು ಕೂಗಾಡುತ್ತಿರುವ ದೃಶ್ಯ ಕಂಡುಬಂದಿದೆ.

2018ರಲ್ಲಿ ಇಂಟೀನಿಯರ್ ಡಿಸೈನರ್‌ವೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗೋಸ್ವಾಮಿಯವರನ್ನು ವರ್ಲಿಯಲ್ಲಿರುವ ಅವರ ಮನೆಯಿಂದ ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News