×
Ad

ಕಾಪು ಶಾಸಕ ಲಾಲಾಜಿ ಮೆಂಡನ್ ಗೆ ಸಚಿವ ಸ್ಥಾನ ನೀಡಲು ಮೀನುಗಾರರ ವೇದಿಕೆ ಆಗ್ರಹ

Update: 2020-11-20 14:42 IST

ಮಂಗಳೂರು : ರಾಜ್ಯ ವಿಧಾನ ಸಭೆಯಲ್ಲಿ ಮೊಗವೀರ ಸಮುದಾಯಕ್ಕೆಸೇರಿದ ಮೀನುಗಾರ ಸಮುದಾಯದ ಆಡಳಿತ ಪಕ್ಷದ ಏಕೈಕ ಪ್ರತಿನಿಧಿಯಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮಂಗಳೂರಿನ ಸಮಾನ ಮನಸ್ಕ ಮೀನುಗಾರರ ವೇದಿಕೆ ಆಗ್ರಹಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ದ.ಕ ಮತ್ತು ಉಡುಪಿ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಶರತ್ ಗುಡ್ಡೆಕೊಪ್ಲ, ಮೂರು ಬಾರಿ ಶಾಸಕರಾಗಿ ಅನುಭವ ಹೊಂದಿರುವ ಅನುಭವಿ ಮತ್ತು ನಿಷ್ಕಳಂಕ ರಾಜಕಾರಣಿಯಾದ ಲಾಲಾಜಿ ಮೆಂಡನ್ ಅವರಿಗೆ ಅರ್ಹವಾಗಿ ಸಚಿವ ಸ್ಥಾನ ದೊರೆಯಲೇಬೇಕು ಎಂದರು.

ಗಂಗಾಮತ/ಮೊಗವೀರ ಸಮುದಾಯಕ್ಕೆ ಸೇರಿದ 39 ವಿವಿಧ ಮೀನುಗಾರರ ಸಮುದಾಯದ ಕರ್ನಾಟಕದಲ್ಲಿ 80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೊಗವೀರ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮೀನುಗಾರರ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ. ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕಾದರೆ ಲಾಲಾಜಿ ಮೆಂಡನ್ ಅವರು ಸಚಿವರಾಗಬೇಕು. ಈ ಹಿಂದೆಯೂ ಮೆಂಡನ್ ಅವರಿಗೆ ಸ್ಥಾನ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದೆವು. ಆದರೆ ದೊರೆತಿರಲಿಲ್ಲ. ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೊಗವೀರ ಸಮಾಜದ ಹಿರಿಯ ಮುಖಂಡ ನ್ಯಾಯವಾದಿ, ದಯಾನಾಥ್ ಕೋಟ್ಯಾನ್, ದ.ಕ ಮೊಗವೀರ ಮಹಾಜನ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಗಂಗಾಧರ ಹೊಸಬೆಟ್ಟು, ಉಪಾಧ್ಯಕ್ಷ ದೇವದಾಸ್ ಬೋಳೂರು, ಮಂಗಳೂರು ಹದಿನಾಲ್ಕು ಪಟ್ನ ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ರಾಜೀವ್ ಕಾಂಚನ್ , ಉರ್ವ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಕರ್ಕೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News