ಜಾತಿ ರಾಜಕಾರಣ ಬಿಜೆಪಿಯ ಚುನಾವಣಾ ಗಿಮಿಕ್: ಹರೀಶ್ ಕುಮಾರ್

Update: 2020-11-20 09:43 GMT

ಮಂಗಳೂರು, ನ.20: ಜಾತಿ ರಾಜಕಾರಣ ಮಾಡುವುದು ಬಿಜೆಪಿಯ ಚುನಾವಣಾ ಗಿಮಿಕ್ ಹೊರತು ಕಾಂಗ್ರೆಸ್ ಇಂತಹ ಕಾರ್ಯ ಯಾವುತ್ತೂ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಹೆಸರು ನಾಮಕರಣಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರಿಸಿದ್ದಾರೆ. ಹಾಗಿರುವಾರ ರಾಜ್ಯ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸೂಚಿಸಿ ಕೇಂದ್ರ ಸರ್ಕಾರಕ್ಕೆ ಹೆಸರು ಕಳುಹಿಸಬೇಕು. ಇಲ್ಲವೇ ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕು. ಇಂತಹ ಯಾವುದೇ ಕೆಲಸ ವನ್ನು ಮಾಡದೆ ಬಿಜೆಪಿ ಜಾತಿ ಹೆಸರಿನಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸುವ ಬಗ್ಗೆ ಸ್ಥಳೀಯ ಮಳವೂರು ಗ್ರಾಮ ಪಂಚಾಯಿತ್‌ನಲ್ಲಿ ನಾಲ್ಕು ವರ್ಷ ಗಳ ಹಿಂದೆ ನಿರ್ಣಯಿಸಿದ್ದು, ಅದನ್ನು ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಟ್ಟಿದೆ. ಅಲ್ಲಿಂದ ರಾಜ್ಯ ಸರ್ಕಾರಕ್ಕೆ ತೀರ್ಮಾನವನ್ನು ಕಳುಹಿಸಲಾಗಿದೆ. ಆದರೆ ರಾಜ್ಯ ಸರಕಾರಕ್ಕೆ ಕೋಟಿ ಚೆನ್ನಯ ಹೆಸರಿಡುವ ಮನಸ್ಸಿಲ್ಲ . ಅದಕ್ಕೆ ಪ್ರಸ್ತಾವನೆಯನ್ನು ಹಿಂದಕ್ಕೆ ಕಳುಹಿಸಿದೆ ಎಂದು ಹರೀಶ್ ಕುಮಾರ್ ದೂರಿದರು.

ಯಾವುದಾದರೂ ಚುನಾವಣೆ ಸಮೀಪಿಸುತ್ತಿರುವಾಗಲೇ ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ಗಿಮಿಕ್ ಆರಂಭಿಸುತ್ತದೆ. ಈಗಾಗಲೇ ವಿವಿಧ ಜಾತಿಗಳಿಗೆ ಪ್ರಾಧಿಕಾರ ಅಥವಾ ನಿಗಮ ರಚಿಸಲಾಗಿದೆ. ಸುಮಾರು 20ಕ್ಕೂ ಅಧಿಕ ಪ್ರಾಧಿಕಾರಗಳಿಗೆ ಅಧ್ಯಕ್ಷರೇ ಇಲ್ಲ. ನಾರಾಯಣಗುರು ಜಯಂತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ. ಅದೇ ರೀತಿ ಪುತ್ತೂರು ಪಡುಮಲೆಯಲ್ಲಿ ಕೋಟಿ ಚೆನ್ನಯ ಜನ್ಮಸ್ಥಾನ ಪುನರುಜ್ಜೀವನಕ್ಕೆ ಹಣ ಕಾಸು ನೆರವು ನೀಡಿದ್ದು ಆಗಿನ ಶಾಸಕಿ ಶಕುಂತಳಾ ಶೆಟ್ಟಿ, ಔಷಧವನ ಸ್ಥಾಪನೆಗೂ ಮಾಜಿ ಸಚಿವ ರಮಾನಾಥ ರೈ ನೆರವು ನೀಡಿದ್ದರು ಎಂದು ಹರೀಶ್ ಕುಮಾರ್ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದ ಗುತ್ತಿಗೆ ಅವಧಿಯನ್ನು ಸಾಮಾನ್ಯವಾಗಿ 30 ವರ್ಷಕ್ಕೆ ನೀಡುವುದು ಕ್ರಮ. ಆದರೆ ಇಲ್ಲಿ 50 ವರ್ಷದ ವರೆಗೆ ಗುತ್ತಿಗೆ ಅವಧಿ ನೀಡಲಾಗಿದೆ. ಇದು ನಿಯಮಬಾಹಿರವಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಇದೆ. ರಾಜ್ಯ ಹಾಗೂ ಕೇಂದ್ರ ದಲ್ಲಿ ಒಂದೇ ಪಕ್ಷದ ಸರ್ಕಾರ ಇದೆ. ಇಲ್ಲಿನ ಸಂಸದರು ಪಕ್ಷದ ರಾಜ್ಯಾಧ್ಯಕ್ಷರು ಆಗಿದ್ದಾರೆ. ಆದರೂ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇರಿಸಲು ಸಾಧ್ಯವಾಗುತಿತಿಲ್ಲ ಎಂದರೆ ಏನರ್ಥ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಅಬ್ದುಲ್ ರವೂಫ್, ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್, ಎ.ಸಿ.ವಿನಯರಾಜ್, ಅನಿಲ್ ಕುಮಾರ್, ನೀರಜ್‌ಪಾಲ್, ನಝೀರ್ ಬಜಾಲ್ ಇದ್ದರು.

ಲೋಕಸಭಾ ಚುನಾವಣೆ ವೇಳೆ ಮಂಗಳೂರಿಗೆ ಪ್ರಚಾರಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರು, ಮಂಗಳೂರಿಗೂ ಗುಜರಾತಿಗೆ ಇರುವ ನಂಟನ್ನು ಪ್ರಸ್ತಾಪಿಸಿದ್ದರು. ಅಡಕೆ ಮಾರುಕಟ್ಟೆ ಜೊತೆಗೆ ತೆಂಗು, ಕಾಳುಮೆಣಸು ಮಾರುಕಟ್ಟೆ ಲಭಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದಾನಿ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ಪ್ರಧಾನಿ ಮೋದಿ ದೃಷ್ಟಿ ಹಾಕಿದ್ದೇ ಮಂಗಳೂರು ವಿಮಾನ ನಿಲ್ದಾಣಕ್ಕೆ. ಅದನ್ನೇ ಗುಜರಾತಿನ ಅದಾನಿಗೆ ನೀಡಿದ್ದಾರೆ ಎಂದು ಹರೀಶ್ ಕುಮಾರ್ ಅಸಮಾಧಾ ವ್ಯಕ್ತಪಡಿಸಿರು.

ವಿಮಾನ ನಿಲ್ದಾಣವನ್ನು ನಿರ್ವಹಣೆಗೆ ಮಾತ್ರ ಅದಾನಿಗೆ ನೀಡಿದರೂ ಹೆಸರನ್ನೇ ಬದಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲೂ ಮುಂಬಯಿ, ದೆಹಲಿ ಸೇರಿದಂತೆ ದೇಶದ ಕೆಲವು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಲಾಗಿತ್ತು. ಆಗ ಎಲ್ಲಿಯೂ ವಿಮಾನ ನಿಲ್ದಾಣದ ಹೆಸರು ಬದಲಾವಣೆಗೊಂಡ ಬಗ್ಗೆ ಉದಾಹರಣೆ ಇಲ್ಲ ಎಂದು ಹರೀಶ್ ಕುಮಾರ್ ಹೇಳಿದರು.

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರಾವಳಿಯ ವೀರ ಪುರುಷ ಕೋಟಿ ಚೆನ್ನಯರ ಹೆಸರು ಇರಿಸುವ ಬಗ್ಗೆ 2012ರಲ್ಲೇ ಸಂಸದ ನಳಿನ್ ಕುಮಾರ್ ಕಟೀಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈಗಲೂ ಆ ಬಗ್ಗೆ ಪ್ರಯತ್ನದಲ್ಲಿದ್ದಾರೆಂಬ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪಂಪ್‌ವೆಲ್ ಮೇಲ್ಸೆತುವೆಗಾಗಿ 10 ವರ್ಷಗಳ ಕಾಲ ನಳಿನಣ್ಣರ ಪ್ರಯತ್ನ ಪಟ್ಟಿದ್ದಾರೆ. ಇದೀಗ ಮತ್ತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಆ ಪ್ರಯತ್ನ ಬೇಡ ಎಂದು ಮಾರ್ಮಿಕವಾಗಿ ನುಡಿದರು.

ಅವರು ಪ್ರಸ್ತಾಪ ಸಲ್ಲಿಸಿದ್ದು, ನಿಜವೇ ಆಗಿದ್ದರೆ, ಪ್ರಸ್ತಾವನೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ದಾಖಲೆ ನೀಡಲಿ. ಅವರೀಗ ಸಂಸದರು ಮಾತ್ರವಲ್ಲ, ಪಕ್ಷದ ರಾಜ್ಯಾಧಯಕ್ಷರು ಡಬಲ್ ಪವರ್ ಇದೆ. ಇದು ಅವರ ಪಾಲಿಗೆ ಸಣ್ಣ ವಿಚಾರವಾಗಿರಬಹುದು. ಆದರೆ ಚುನಾವಣೆ ಬಂದಾಗ ಎಲ್ಲಾ ರೀತಿಯ ಗಿಮಿಕ್ ಮಾಡುತ್ತಾರೆ ಎಂದು ಮಿಥುನ್ ರೈ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News