ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
Update: 2020-11-20 17:08 GMT
ಬೈಂದೂರು, ನ.20: ಕೈಗಾ ಅಣು ಸ್ಥಾವರದಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿ ಹಲವು ಮಂದಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಳಜಿತ್ ನಿವಾಸಿ ಸುಬ್ಬ ಕೊಠಾರಿ ಎಂಬವರ ಮಗ ಸತೀಶ್(25) ಎಂಬವರಿಗೆ ರಿತೇಶ್ ಪಟ್ವಾಲ್ ಎಂಬಾತ ಕೈಗಾ ಅಣು ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅ.1ರಂದು 20,000ರೂ. ಪಡೆದುಕೊಂಡಿದ್ದನು. ನ.14ರಂದು ನೇಮಕಾತಿ ಪತ್ರವನ್ನು ಕೆಲಸಕ್ಕೆ ಸೇರಿಸುವ ದಿನ ವಾಪಾಸ್ಸು ಕೊಡುವುದಾಗಿ ತಿಳಿಸಿ ನೇಮಕಾತಿ ಪತ್ರವನ್ನು ಪಡೆದಿದ್ದನು.
ನಂತರ ಆತ, ಮಹೇಶ್, ವಿಜಯ್, ಗೌತಮ್, ನಂದೀಶ, ಸಚಿನ್ ಹಾಗೂ ಇತರರಿಗೆ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿ, ಅವರಿಂದ ಎಂಟು ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.