ಮೀಸಲು ಅರಣ್ಯದಲ್ಲಿ ಬೇಟೆಗೆ ಯತ್ನ: ಓರ್ವನ ಬಂಧನ
Update: 2020-11-20 17:09 GMT
ಗಂಗೊಳ್ಳಿ, ನ.20: ಆಲೂರು ಗ್ರಾಮದ ಮೂಕಾಂಬಿಕಾ ಅಭಯಾರಣ್ಯದ ಅಬ್ಬಿಗುಡ್ಡೆ ಮೀಸಲು ಅರಣ್ಯದ ಕೆರೆಕೊಡ್ಲು ಎಂಬಲ್ಲಿ ನ.15ರಂದು ನಸುಕಿನ ವೇಳೆ ನಾಡಾ ಬಂದೂಕಿನೊಂದಿಗೆ ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸಿದ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹರ್ಕೂರು ಗ್ರಾಮದ ನಾರ್ಕಳಿ ನಿವಾಸಿ ಮಹೇಶ ಪೂಜಾರಿ(27) ಬಂಧಿತ ಆರೋಪಿ. ಈತನನ್ನು ಈಗಾಗಲೇ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವ ಆರೋಪಿ ಹರ್ಕೂರು ಗ್ರಾಮದ ಪ್ರಶಾಂತ್ ಪೂಜಾರಿ(26) ಎಂಬಾತ ತಲೆಮರೆಸಿಕೊಂಡಿದ್ದಾನೆ.
ಇವರು ನಾಡ ಬಂದೂಕನ್ನು ಕಾಡು ಪ್ರಾಣಿಗಳ ಬೇಟೆಯಾಡುವ ಉದ್ದೇಶಕ್ಕೆ ಉಪಯೋಗಿಸಿರುವುದರಿಂದ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಆರೋಪಿಗಳ ಬಗ್ಗೆ ಮುಂದಿನ ವಿಚಾರಣೆ ಕೈಗೊಳ್ಳಲು, ನಾಡ ಬಂದೂಕು ಹಾಗೂ ಕಾಲಿ ಕೇಪ್ ನ್ನು ಅರಣ್ಯ ಅಧಿಕಾರಿಗಳು, ಗಂಗೊಳ್ಳಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.