ಬೆಳ್ತಂಗಡಿ : ಅಂಗಡಿ ಮಾಲಕನಿಗೆ ಹಲ್ಲೆಗೈದು ನಗದು ದರೋಡೆಗೈದ ದುಷ್ಕರ್ಮಿಗಳ ತಂಡ

Update: 2020-11-25 07:40 GMT

ಬೆಳ್ತಂಗಡಿ : ನಾವೂರು ಗ್ರಾಮದ  ಕೈಕಂಬ ಬಸ್ ತಂಗುದಾಣ ಬಳಿ ವ್ಯಾಪಾರ ನಡೆಸುತ್ತಿದ್ದ ಕೃಷ್ಣಪ್ಪ ಗೌಡ ಅವರು ರಾತ್ರಿ ಅಂಗಡಿಗೆ ಬಾಗಿಲು ಹಾಕಿ ಹೊರಡುವ ಸಂದರ್ಭ ಅವರ ಮೇಲೆ ಹಲ್ಲೆಗೈದು, ಸುಮಾರು1.50 ಲಕ್ಷ ರೂ ನಗದನ್ನು ದರೋಡೆಗೈದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಕೃಷ್ಣಪ್ಪ ನ.24ರಂದು ರಾತ್ರಿ ಸುಮಾರು 10ಗಂಟೆಗೆ ಅಂಗಡಿಗೆ ಬೀಗ ಹಾಕಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಡುವ ಸಂದರ್ಭ ದರೋಡೆಕೋರ ತಂಡ ಕೃಷ್ಣಪ್ಪ ಅವರ ಕಣ್ಣಿಗೆ ಖಾರಾದ ಪುಡಿ ಎರಚಿದ್ದು, ಅವರ ತಲೆಗೆ ರಾಡ್‌ನಿಂದ ಹಲ್ಲೆಗೈದು ಅವರ ಕೈಯ್ಯಲ್ಲಿದ್ದ 1.50 ಲಕ್ಷ ರೂ. ನಗದು ಹಾಗು ಇತರ ಸೋತ್ತುಗಳನ್ನು ದೊಚಿ ಪರಾರಿಯಾಗಿದ್ದಾರೆ.

ಹಲ್ಲೆಗೈಯ್ಯುವ ವೇಳೆ ಕೃಷ್ಣಪ್ಪ ಅವರು ಬೊಬ್ಬೆ ಹೊಡೆದಿದ್ದು, ಕೂಡಲೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು,  ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News