ಅಹ್ಮದ್ ಪಟೇಲ್ ರಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ

Update: 2020-11-26 10:14 GMT

ಮಂಗಳೂರು, ನ.26: ಬುಧವಾರ ನಿಧನರಾದ ರಾಜ್ಯಸಭೆ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು ಅಹ್ಮದ್ ಪಟೇಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ನುಡಿ ನಮನ ಸಲ್ಲಿಸಿದ ರಮಾನಾಥ ರೈ, "ಗಾಂಧಿ ಕುಟುಂಬದ ಆಪ್ತರಾಗಿದ್ದ ಅಹ್ಮದ್ ಪಟೇಲ್, ತಾಪಂ ಚುನಾವಣೆ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು. ನಂತರದ ದಿನಗಳಲ್ಲಿ ಉನ್ನತ ಮಟ್ಟದ ನಾಯಕರಾಗಿ ಬೆಳೆದರು. ಅಹ್ಮದ್ ಪಟೇಲರು ಕಾಂಗ್ರೆಸ್ ಅನ್ನೋ ಕಟ್ಟಡದ ಒಂದು ಪಿಲ್ಲರ್ ನಂತಿದ್ದರು. ಅವರ ಅಗಲುವಿಕೆ ಪಕ್ಷದ ಓರ್ವ ನಾಯಕನನ್ನಾಗಿ ಮಾತ್ರವಲ್ಲದೆ, ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ" ಎಂದರು.

ಈ ಸಂದರ್ಭ ಮಹಿಳಾ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷೆ ಶಾಂತಲಾ ಗಟ್ಟಿ ಪತಿ ಯೋಗೀಶ್ ಗಟ್ಟಿ ಹಾಗೂ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನಕ್ಕೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸುರೇಂದ್ರ ಕಂಬಳಿ, ಜೆ.ಅಬ್ದುಲ್ ಸಲೀಂ, ಸದಾಶಿವ ಉಳ್ಳಾಲ, ಶಾಹುಲ್ ಹಮೀದ್, ವಿಶ್ವಾಸ್ ದಾಸ್, ಸುಭೋದ್ ಆಳ್ವ, ಅಬ್ಬಾಸ್ ಅಲಿ, ಮಹಾನಗರ ಪಾಲಿಕೆ ಆಲಿ ಹಾಗೂ ಮಾಜಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News