ಸಿಎಂ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ವಿಚಾರ; ವೀಡಿಯೊ ಬಿಡುಗಡೆ ಬಗ್ಗೆ ಹೇಳಿಕೆ ನೀಡಿಲ್ಲ : ಡಿಕೆ ಶಿವಕುಮಾರ್

Update: 2020-11-29 07:23 GMT

ಉಡುಪಿ : ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ವಿಚಾರದಲ್ಲಿ ವೀಡಿಯೊ ಬಿಡುಗಡೆ ಮಾಡ್ತೀನಿ ಎಂದು ನಾನು ಹೇಳಿಲ್ಲ ನೀಡಿಲ್ಲ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈಗಾಗಲೇ ಓರ್ವ ಮಾದ್ಯಮ ಕಾರ್ಯದರ್ಶಿ ರಾಜಿನಾಮೆ ಕೊಟ್ಟಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಅಂದ್ರೆ ರಸ್ತೆಲಿ‌ ಹೋಗೋರಲ್ಲ, ಸಾಮಾನ್ಯ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲಾ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿ ಬರುತ್ತಿತ್ತು. ಅವರ ಎಲ್ಲಾ ವ್ಯವಹಾರಗಳು ನಮಗೆ ಗೊತ್ತಿದೆ. ಸರ್ಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ. ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ. ಸಂಸಾರದಲ್ಲಿ ಯಾವುದೇ ಬಿರುಕಿರಲಿಲ್ಲ ಎಂದು ಈಗಾಗಲೇ ಅವರ ಪತ್ನಿ ಹೇಳಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದಾರೆ. ವಿರೋಧ ಪಕ್ಷದ ಅಧ್ಯಕ್ಷನಾಗಿದ್ದು ಕಣ್ಣುಮುಚ್ಚಿ‌ ಕೂರೋಕಾಗುತ್ತಾ. ರಾಜ್ಯದ ಜನತೆಗೆ ತಿಳಿಸೋದು ನನ್ನ ಜವಾಬ್ದಾರಿ ಎಂದು ಡಿಕೆಶಿ ಹೇಳಿದರು.

ಗೃಹ ಸಚಿವರು ತನಿಖೆ ಮಾಡುವುದಾಗಿ ಹೇಳಿದ್ದಾರೆ. ಸಿಡಿ ಇತ್ತೋ ಇಲ್ವೋ, ರೆಕಾರ್ಡ್ ಇತ್ತೋ ಇಲ್ವೋ ಎಲ್ಲಾ ಹೊರಬರಲಿ. ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿತ್ತು. ಈ ವಯಸ್ಸಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಮಾಡ್ಕೊಳಲ್ಲ. ಅಧಿಕಾರಕ್ಕೆ ತೊಂದರೆ ಆಗಿರಬೇಕು, ಹೆಸರಿಗೆ ಕುಂದು ಬಂದಿರಬಹುದು. ಏನು ವ್ಯವಹಾರ ಏನು ರಾಜಕಾರಣ ಜನರಿಗೆ ತಿಳಿಸಿ, ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ತಾ ಇದಾರೆ. ನಾನೇನೂ ಈಶ್ವರಪ್ಪ ಸುದ್ದಿ ಮಾತಾಡಿಲ್ಲ, ಯಾರ್ಯಾರು ಎಲ್ಲೆಲ್ಲಿ ಏನೇನು‌ ಕೊಟ್ಟಿದ್ದಾರೆ ನಮಗೂ ಗೊತ್ತು. ನಮಗೆ ಅವಶ್ಯಕತೆ ಇಲ್ಲದ ವಿಚಾರ ಅಂತ ಸುಮ್ನಿದ್ದೇವೆ ಎಂದು ಹೇಳಿದರು.

ನಮ್ಮ ಸರ್ಕಾರ ಬೀಳಲು ಡಿಕೆಶಿ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದಲ್ಲಿ ಮಾಡನಾಡಿದ ಡಿಕೆಶಿ ಕುಮಾರಸ್ವಾಮಿ ಏನು ಬೇಕಾದ್ರೂ ಮಾತಾಡ್ಲಿ, ಅವರು ಹಿರಿಯರು. ಇಷ್ಟು ಜಲ್ದಿ ಹೇಳ್ತಾ ಇದ್ದಾರಲ್ವಾ  ಎಂದು ಡಿಕೆಶಿ ವ್ಯಂಗ್ಯವಾಡಿದರು. ಇನ್ನೂ ಏನಾದ್ರೂ ಬಾಕಿ‌ಯಿದ್ರೆ ಹೇಳಲಿ ಸಂತೋಷ ಎಂದರು.

ನಾಳೆ ಹಿರಿಯ ಪಕ್ಷದ ನಾಯಕರ ಸಭೆ ಕರೆದಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವಿಚಾರ, ರಾಜ್ಯ ಸಂಪುಟ ವಿಸ್ತರಣೆ, ಅವರ ಆಂತರಿಕ ವಿಚಾರ, ಕಾಂಗ್ರೆಸ್ ಪಕ್ಷಕ್ಕೂ ಬಿಜೆಪಿ ಇಂಟರ್ನಲ್ ವಿಷಯಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.

ಲವ್ ಜಿಹಾದ್ ಕಾನೂನು ತರುವ ಮೊದಲು ಕೇಂದ್ರದತ್ತ ಒಮ್ಮೆ ನೋಡಿ. ಯಾವ ಲೀಡರ್ ಮಕ್ಕಳು ಯರ್ಯಾರನ್ನು ಲವ್ ಮಾಡಿದ್ದಾರೆ ಎಂದು ತಿಳಿದುಕೊಳ್ಳಿ. ಬಿಜೆಪಿ ಇರಲಿ ಕಾಂಗ್ರೆಸ್ ಇರ್ಲಿ ಪಾರ್ಟಿ ಯಾವುದೇ ಇರಲಿ, ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು. ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಎಂದು ಡಿಕೆಶಿ ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News