ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಸುರತ್ಕಲ್, ನ. 29 : ಸುರತ್ಕಲ್ ಸಮೀಪದ ಕಾನ ಕಟ್ಲ ಪರಿಶಿಷ್ಟ ಜಾತಿ ಪಂಗಡದ ಕಾಲನಿಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ಒಳಚರಂಡಿ ತ್ಯಾಜ್ಯ ನೀರು ಸೋರಿಕೆಯಾಗುತ್ತಿದ್ದು, ಇದರಿಂದ ಸುತ್ತಮುತ್ತಲಿನ ಜನರು ಕುಡಿಯುವ ನೀರಿನ ಮೂಲ ಕಳೆದುಕೊಂಡಿದ್ದಾರೆ. ಹಾಗಾಗಿ ಒಳಚರಂಡಿ ಸೋರಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ಸೋರಿಕೆಯಿಂದ ದುರ್ವಾಸನೆ ಹರಡಿ ಕೊರೋನ ಜತೆ ಎರಡೆರಡು ಮಾಸ್ಕ್ ಹಾಕಿ ದಿನ ದೂಡುವಂತೆ ಆಗಿದೆ. ದುರಸ್ತಿ ಮಾಡಿ ಕೊಡುವಂತೆ ಅಧಿಕಾರಿಗಳಲ್ಲಿ ಹೇಳಿದರೆ ಇನ್ನೂ ಕ್ರಮ ಕೈಗೊಂಡಿಲ್ಲ. ಬಿಜೆಪಿ ಶಾಸಕರು ಈ ಭಾಗದಲ್ಲಿ ಆಯ್ಕೆಯಾದ ಬಳಿಕ ಅಭಿವೃದ್ಧಿ ನಿಂತ ನೀರಾಗಿದೆ. ಕಾನ-ಬಾಳ ರಸ್ತೆಯಲ್ಲಿ ಇಂದು ಹೊಂಡಗುಂಡಿಗಳಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ 52 ಕೋ.ರೂ. ಚತುಷ್ಪಥ ರಸ್ತೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ತಾನಿದ್ದ ಸಂದರ್ಭ ಚಾಲನೆ ಕೊಟ್ಟ ಯಾವುದೇ ಕೆಲಸಗಳು ಪೂರ್ತಿಯಾಗಿಲ್ಲ. ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಸಲ್ಲದು ಎಂದು ಶಾಸಕ ಮೊಯ್ದಿನ್ ಬಾವಾ ಆರೋಪಿಸಿದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಗೋವರ್ಧನ ಶೆಟ್ಟಿಗಾರ್, ಬಶೀರ್ ಬೈಕಂಪಾಡಿ, ಮನಪಾ ಸದಸ್ಯ ಅನಿಲ್ ಕುಮಾರ್, ಆನಂದ ಅಮೀನ್, ಸುರತ್ಕಲ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಪದ್ಮನಾಭ್, ಹಿದಾಯತ್, ಅಬ್ದುಲ್ ಜಲೀಲ್, ರಾಜ ಕಟ್ಲ ಮತ್ತಿತರರು ಉಪಸ್ಥಿತರಿದ್ದರು.