ಶ್ರೀಕೃಷ್ಣ ಮಠ ಇತಿಹಾಸದ 251ನೇ ಪರ್ಯಾಯಕ್ಕೆ ಪೂರ್ವಸಿದ್ಧತೆ ಪ್ರಾರಂಭ

Update: 2020-11-30 12:38 GMT

ಉಡುಪಿ, ನ.30: 2022ರ ಜನವರಿ 18ರ ಮುಂಜಾನೆ ನಡೆಯುವ ಕೃಷ್ಣಾಪುರ ಮಠದ ಮುಂದಿನ ಪರ್ಯಾಯಕ್ಕೆ ಪೂರ್ವಭಾವಿ ಸಿದ್ಧತೆಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಸೋಮವಾರ ಬೆಳಗ್ಗೆ 8:32ಕ್ಕೆ ರಥಬೀದಿಯಲ್ಲಿರುವ ಕೃಷ್ಣಾಪುರ ಮಠದ ಆವರಣದಲ್ಲಿ ನಡೆಯಿತು.

ಉಡುಪಿಯಲ್ಲಿರುವ ಅಷ್ಟಮಠಗಳ ನಡುವೆ ಶ್ರೀಕೃಷ್ಣನ ಪೂಜೆಗೆ ದ್ವೈವಾರ್ಷಿಕ ಪರ್ಯಾಯ ಸಂಪ್ರದಾಯ ಪ್ರಾರಂಭಗೊಂಡ ನಂತರ ಈಗ ನಡೆದಿರುವ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಪರ್ಯಾಯ 32ನೇ ಚಕ್ರದ ಎರಡನೇ (ಅಂದರೆ 250ನೇ) ಪರ್ಯಾಯವಾಗಿದ್ದು, ಮುಂದೆ ನಡೆಯುವ ಕೃಷ್ಣಾಪುರ ಮಠದ ಪರ್ಯಾಯ ಶ್ರೀಕೃಷ್ಣ ಮಠದ ಇತಿಹಾಸದ 251ನೇ ಪರ್ಯಾಯವಾಗಿ ದಾಖಲಾಗಲಿದೆ.

ಕೃಷ್ಣಾಪುರ ಮಠದ ಯತಿಗಳಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ಬಾಳೆ ಮುಹೂರ್ತದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ಜನಪ್ರತಿನಿಧಿಗಳು ಸೇರಿದಂತೆ ಅನೇಕ ಮಂದಿ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ರಥಬೀದಿಯಲ್ಲಿರುವ ಕೃಷ್ಣಾಪುರ ಮಠದಲ್ಲಿ ನವಗ್ರಹ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಚಂದ್ರವೌಳೀಶ್ವರ, ಅನಂತೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಶ್ರೀಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರಿಗೆ, ಗೋಶಾಲೆ, ಗುರುಗಳ ಬೃಂದಾವನಗಳಲ್ಲಿ ಪ್ರಾರ್ಥಿಸಲಾಯಿತು. ಅನಂತರ ಶ್ರೀಮಠಕ್ಕೆ ಮರಳಿ ಬಾಳೆಗಿಡ, ತುಳಸಿ, ಕಬ್ಬುಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಬಂದು ಕೃಷ್ಣಾಪುರ ಮಠದ ಜಾಗದಲ್ಲಿ ಬಾಳೆಗಿಡ, ತುಳಸಿ ಹಾಗೂ ಕಬ್ಬಿನ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.

ತಮ್ಮ ಪರ್ಯಾಯಾವಧಿಯಲ್ಲಿ ಅನ್ನದಾನವೂ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾಗುವ ಬಾಳೆಎಲೆ ಹಾಗೂ ತುಳಸಿಯನ್ನು ಶ್ರೀಪಾದರು ಇಲ್ಲಿಂದಲೇ ಪಡೆಯುವ ಸಂಪ್ರದಾಯವಿದೆ. ಪರ್ಯಾಯ ಪೂರ್ವ ಸಿದ್ಧತೆಯ ಎರಡನೇ ಕಾರ್ಯಕ್ರಮವಾಗಿ ಜನವರಿ ತಿಂಗಳಲ್ಲಿ ಅಕ್ಕಿ ಮುಹೂರ್ತ, ಮುಂದೆ ಇದೇ ಸರಣಿಯಲ್ಲಿ ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತಗಳು ನಡೆಯಲಿವೆ.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ಶ್ರೀಪಾದರು, ಕೃಷ್ಣಾಪುರ ಮಠದ ಮುಂದಿನ ಪರ್ಯಾಯಕ್ಕೆ ಊರಿನ ಸಮಸ್ತರ ಹಾಗೂ ಮಠದ ಭಕ್ತರು, ಅಭಿಮಾನಿಗಳ ಸರ್ವ ಸಹಕಾರವನ್ನು ಕೋರಿದರು. ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ. ರಘುಪತಿ ಭಟ್, ಯಶ್ಪಾಲ್ ಸುವರ್ಣ, ಕುಂಭಾಶಿ ಸೂರ್ಯನಾರಾಯಣ ಉಪಾಧ್ಯ, ಪ್ರದೀಪ್ ಕಲ್ಕೂರ, ಪ್ರದೀಪ್ ಕುಮಾರ್, ಯು.ಕೆ.ರಾಘವೇಂದ್ರ ರಾವ್, ರಘುರಾಮ ಆಚಾರ್ಯ, ಬಾಲಾಜಿ ರಾಘವೇಂದ್ರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News