ಬಾಲಕಿಯ ಜತೆ ಸ್ನೇಹ ಬೆಳೆಸಿ ಅತ್ಯಾಚಾರ: ಆರೋಪ ಸಾಬೀತು

Update: 2020-12-01 15:29 GMT

ಮಂಗಳೂರು, ಡಿ.1: ಬಾಲಕಿಯ ಜತೆ ಸ್ನೇಹ ಬೆಳೆಸಿ ಅತ್ಯಾಚಾರವೆಸಗಿದ ಪ್ರಕರಣ ಜಿಲ್ಲಾ ಮತ್ತು ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗೆ ಶಿಕ್ಷೆ ಪ್ರಮಾಣವನ್ನು ಡಿ.4ಕ್ಕೆ ಕಾದಿರಿಸಲಾಗಿದೆ.

ಬೆಳ್ತಂಗಡಿ ಕಾಶಿಪಟ್ನ ಕುರಪ್ಪಾಡಿ ನಿವಾಸಿ ಸತೀಶ್ ಆರೋಪ ಸಾಬೀತಾದ ಆರೋಪಿ.

2018ನೇ ಜನವರಿಯಲ್ಲಿ ಆರೋಪಿಯು ಬಾಲಕಿಯನ್ನು ಮನೆಯ ಪಕ್ಕದಲ್ಲಿರುವ ಗುಡ್ಡೆಗೆ ಬರುವಂತೆ ಹೇಳಿ, ಅಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದಾನೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು.

2018 ಆಗಸ್ಟ್ 3ರಂದು ನೊಂದ ಬಾಲಕಿಯ ತಾಯಿ ಮೃತಪಟ್ಟಿದ್ದರು. ಈ ಸಂದರ್ಭ ಮಾವನಿಗೆ ಬಾಲಕಿ ನಡತೆಯ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದ್ದಾರೆ. ಈ ವೇಳೆ ಅತ್ಯಾಚಾರ ನಡೆದು ಗರ್ಭಿಣಿಯಾಗಿರುವ ಸತ್ಯಾಂಶವನ್ನು ಬಾಲಕಿ ಬಾಯಿ ಬಿಟ್ಟಿದ್ದಾಳೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಗ್ಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ ನ್ಯಾಯಾಧೀಶರಾದ ಸಾವಿತ್ರಿ ವೆಂಕಟರಮಣ ಭಟ್ ಸಮಗ್ರ ವಿಚಾರಣೆ ನಡೆಸಿ ಐಪಿಸಿ ಸೆಕ್ಷನ್ 376 ಮತ್ತು ಸೆಕ್ಷನ್ 6 ಪೋಕ್ಸೋ ಕಾಯ್ದೆಯಡಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ನಿರೀಕ್ಷಕರು ಪ್ರಕರಣವನ್ನು ತನಿಖೆ ನಡೆಸಿ, ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 14 ಸಾಕ್ಷಿದಾರರನ್ನು ವಿಚಾರಣೆ ಮಾಡಿ 18 ದಾಖಲೆಗಳನ್ನು ಗುರುತಿಸಲಾಗಿತ್ತು. ನೊಂದ ಬಾಲಕಿಯ ಮತ್ತು ಮಗುವಿನ ಡಿಎನ್‌ಎ ವರದಿಯಲ್ಲಿ ಸತೀಶ್ ಮಗುವಿನ ತಂದೆಯೆಂದು ದೃಢಪಟ್ಟಿದೆ. ಶಿಕ್ಷೆ ಪ್ರಮಾಣ ಸಂಬಂಧಿಸಿ ಡಿ.4ಕ್ಕೆ ಪ್ರಕರಣ ಮುಂದೂಡಲಾಗಿದೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ವಾದಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News