ಡಿ.5: ಮಡಪ್ಪಾಡಿ ಪ್ಲಾಸ್ಟಿಕ್ ಮುಕ್ತ ಗ್ರಾಮ ರೂಪಿಸುವ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು, ಡಿ.2: ದ.ಕ.ಜಿಪಂ, ಸುಳ್ಯ ತಾಪಂ, ಮಡಪ್ಪಾಡಿ ಗ್ರಾಪಂ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಅಭಿಯಾನಕ್ಕೆ ಡಿ.5ರಂದು ಚಾಲನೆ ನೀಡಲಾಗುವುದು.
ಮಡಪ್ಪಾಡಿ ಗ್ರಾಪಂ ಸಭಾಂಗಣದಲ್ಲಿ ಪೂ.11ಕ್ಕೆ ನಡೆಯುವ ಕಾರ್ಯಕ್ರಮವನ್ನು ದ.ಕ.ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸುವರು. ಸುಳ್ಯ ತಾಪಂ ಇಒ ಎನ್.ಭವಾನಿಶಂಕರ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಮಡಪ್ಪಾಡಿ ಗ್ರಾಪಂ ಪಿಡಿಒ ಸುರೇಶ್, ಮಂಗಳೂರು ರೋಹನ್ ಕಾರ್ಪೊರೇಶನ್ ಸಂಸ್ಥೆಯ ಅಧ್ಯಕ ರೋಹನ್ ಮೊಂತೆರೊ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ 1ಕೆಜಿ ಪ್ಲಾಸ್ಟಿಕ್ ತರುವ ಗ್ರಾಮಸ್ಥರಿಗೆ 10 ಕೆಜಿ ಅಕ್ಕಿ, 500 ಗ್ರಾಂ ಪ್ಲಾಸ್ಟಿಕ್ಗೆ 5 ಕೆಜಿ ಅಕ್ಕಿ, 100 ಗ್ರಾಂ ಪ್ಲಾಸ್ಟಿಕ್ ನೀಡಿದವರಿಗೆ 1 ಕೆಜಿ ಅಕ್ಕಿಯನ್ನು ಸಾಂಕೇತಿಕವಾಗಿ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.