ಕಾನೂನು ಪದವಿದರರಿಗೆ ಭವಿಷ್ಯದಲ್ಲಿ ವಿಫುಲ ಅವಕಾಶ: ನ್ಯಾಯವಾದಿ ಅಶ್ವನಿ ಕುಮಾರ್ ರೈ

Update: 2020-12-03 16:28 GMT

ಬಂಟ್ವಾಳ, ಡಿ.3: ವಕೀಲರ ದಿನದ ಪ್ರಯುಕ್ತ ಗುರುವಾರ ಹಿರಿಯ ನ್ಯಾಯವಾದಿ ಎಂ.ಅಶ್ವನಿ ಕುಮಾರ್ ರೈ ಅವರ ಬಿ.ಸಿ.ರೋಡಿನಲ್ಲಿರುವ ಕಚೇರಿಗೆ ಆಗಮಿಸಿದ ಬಿ.ಸಿ.ರೋಡ್ ತಲಪಾಡಿಯಲ್ಲಿರುವ ಡೈಮಾಂಡ್ ಇಂಟರ್ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ, ಸಿಹಿ ಹಂಚಿ ವಕೀಲರ ದಿನವನ್ನು ಆಚರಿಸಿ ಶುಭಕೋರಿದರು. 

ಈ ವೇಳೆ ಮಾತನಾಡಿದ ನ್ಯಾಯವಾದಿ ಅಶ್ವನಿ ಕುಮಾರ್ ರೈ, ನ್ಯಾಯಾಂಗ  ವ್ಯವಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ಉತ್ತಮ ನ್ಯಾಯವಾದಿಗಳು ಇದ್ದಾಗ ಸಾಮಾಜಿಕ ನ್ಯಾಯ ದೊರಕಲು ಸಾಧ್ಯ ಎಂದು ಹೇಳಿದರು. 

ಇಂದು ಕಾನೂನು ಪದವಿ ವ್ಯಾಸಂಗ ಮಾಡುವವರಿಗೆ ಭವಿಷ್ಯದಲ್ಲಿ ವಿಫುಲ ಅವಕಾಶಗಳಿವೆ. ವಿವಿಧ ರಂಗಗಳಲ್ಲಿ ಯಶಸ್ವಿಯಾದವರು ಕಾನೂನು ಪದವೀಧರರೇ ಆಗಿದ್ದಾರೆ. ಕಕ್ಷಿಗಾರನನ್ನು ರಕ್ಷಿಸುವುದು ನ್ಯಾಯವಾದಿಯ ಕರ್ತವ್ಯವೂ ಹೌದು. ಉತ್ತಮ ನ್ಯಾಯವಾದಿಗಳ ಅಗತ್ಯವೂ ಇಂದು ಸಮಾಜಕ್ಕೆ ಇದೆ ಎಂದರು.‌

ಪ್ರತಿಯೊಂದು ವೃತ್ತಿಪರರಲ್ಲಿಯೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ಆದರೆ ಕಾನೂನು ಪಾಲನೆಯ ಪ್ರಮುಖ ವೃತ್ತಿ ನಡೆಸುವ ನ್ಯಾಯವಾದಿ ಗಳು ಉತ್ತಮ ಪ್ರಜ್ಞಾವಂತರಾದಾಗ ಸಮಾಜವೂ ಉತ್ತಮವಾಗಲು ಸಾಧ್ಯ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಡೈಮಾಂಡ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಝೀಶನ್ ಅಲಿ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ, ಮಕ್ಕಳ, ತಂದೆ, ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ಆದರೆ ಶಾಲೆಯೊಂದರಲ್ಲಿ ವಕೀಲ ದಿನವನ್ನು ಆಚರಿಸುತ್ತಿರುವುದು ವಿಶೇಷವಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ವಕೀಲ ಹುದ್ದೆಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿರುವ ಡೈಮಾಂಡ್ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಧನ್ಯವಾದಗಳು ಎಂದರು.

ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿ ಯಾಸಿರ್, ಸಾಮಾಜಿಕ ಕಾರ್ಯಕರ್ತ ರಿಝ್ವಾನ್, ಶಿಕ್ಷಕಿಯರಾದ ಸಂಧ್ಯಾ, ರಂಝೀನಾ, ರಫೀಯಾ, ಸಮೀನಾ, ತನ್ಸೀರಾ, ರುಕ್ಷಾನ, ಸೌಮ್ಯಾ, ಜಿನ್ನ, ಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಮುನವ್ವರ್ ಮಾಝ್ ಕಿರಾಅತ್ ಪಠಿಸಿದರು. ವಿದ್ಯಾರ್ಥಿನಿ ಹಿಝಾ ಮೆಹರಿನ್ ಕಿರು ಭಾಷಣ ಮಾಡಿದರು. ಶಿಕ್ಷಕಿ ಹಫೀಝ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೇವತಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News