ಗ್ರಾಪಂ ಚುನಾವಣೆ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ: ಅಶೋಕ್ ‌ಕುಮಾರ್

Update: 2020-12-04 14:00 GMT

ಉಡುಪಿ, ಡಿ. 4: ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದ ರೊಂದಿಗೆ ಪಕ್ಷದ ಈ ಹಿಂದಿನ ಇತಿಹಾಸವನ್ನು ಮರುಕಳಿಸಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಗ್ರಾಪಂ ಚುನಾವಣೆಯ ಪೂರ್ವ ತಯಾರಿಗಾಗಿ ಜಿಲ್ಲಾ ಕಾಂಗ್ರಸ್ ಭವನದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಾರ್ವಜನಿಕರೊಂದಿಗೆ ಸ್ಪಂದಿಸುವ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗ್ರಾಪಂ ಚುನಾವಣೆ ತಳಮಟ್ಟದಲ್ಲಿ ಪಕ್ಷ ವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.

ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಗ್ರಾಮಸ್ವರಾಜ್ ಆಶಯಗಳನ್ನು ಸಾಕಾರ ಗೊಳಿಸುವಲ್ಲಿ ಗ್ರಾಪಂಗಳು ಪ್ರಧಾನ ಭೂಮಿಕೆ ವಹಿಸುತ್ತವೆ. ಈ ನಿಟ್ಟಿನಲ್ಲಿ ಗರಿಷ್ಟ ಸ್ಥಾನಗಳನ್ನು ಗೆಲ್ಲುವುದು ಪಕ್ಷದ ಗುರಿಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಗೆ ಬರುವ 5 ಬ್ಲಾಕ್‌ಗಳಿಗೆ ಜಿಲ್ಲಾ ಕಾಂಗ್ರೆಸ್ ‌ನಿಂದ ಬ್ಲಾಕ್‌ಗಳಿಗೆ 3 ಜನರಂತೆ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು. ಬ್ಲಾಕ್‌ನಿಂದ ನಿಯುಕ್ತಿಗೊಂಡ ಉಸ್ತುವಾರಿಗಳೊಂದಿಗೆ ಕೂಡಿಕೊಂಡು ಅಭ್ಯರ್ಥಿಯ ಆಯ್ಕೆ, ಸಮಸ್ಯೆಗಳ ಪರಿಹಾರ ಹಾಗೂ ಸ್ಥಳೀಯವಾಗಿ ಚುನಾವಣಾ ಪ್ರಚಾರದ ರಣನೀತಿ ರೂಪಿಸಿ ಕೊಳ್ಳಬೇಕಾಗಿದೆ ಎಂದರು.

ಸಭೆಯಲ್ಲಿ ದಿನೇಶ್ ಪುತ್ರನ್, ವೆರೋನಿಕಾ ಕರ್ನೇಲಿಯೋ, ಬಿ. ನರಸಿಂಹ ಮೂರ್ತಿ, ಕಿಶನ್‌ಹೆಗ್ಡೆ ಕೊಳ್ಕೆಬೈಲ್, ನೀರೆ ಕೃಷ್ಣ ಶೆಟ್ಟಿ, ಹರೀಶ್ ಕಿಣಿ, ಮುರಳಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಹಬೀಬ್ ಅಲಿ, ವಿಶ್ವಾಸ್ ಅಮೀನ್, ಸತೀಶ್ ಅಮೀನ್ ಪಡುಕೆರೆ, ಹರೀಶ್ ಶೆಟ್ಟಿ ಪಾಂಗಾಳ, ಡಾ. ಸುನೀತಾ ಶೆಟ್ಟಿ, ರೋಶನಿ ಒಲಿವರ್, ಉಪೇಂದ್ರ ಮೆಂಡನ್, ಲಕ್ಷಣ ಪೂಜಾರಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಬಿ.ಕುಶಲ್ ಶೆಟ್ಟಿ ಸ್ವಾಗತಿಸಿ, ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News