×
Ad

ಪ್ರಚೋದನಕಾರಿ ಗೋಡೆಬರಹ ಪ್ರಕರಣ: ಆರೋಪಿಗಳಿಗೆ ವಕಾಲತ್ತು ವಹಿಸದಂತೆ ವಕೀಲರ ಸಂಘ ನಿರ್ಣಯ

Update: 2020-12-07 23:00 IST

ಮಂಗಳೂರು, ಡಿ.7: ದೇಶದ್ರೋಹ, ಭಯೋತ್ಪಾದನೆ ಹಾಗೂ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರ ಪರವಾಗಿ ವಕಾಲತ್ತು ನಡೆಸದೇ ಇರುವಂತೆ ಮನವಿ ಮಾಡಲು ಮಂಗಳೂರು ವಕೀಲರ ಸಂಘದ ಕಾರ್ಯಕಾರಿಣಿಯು ನಿರ್ಣಯ ಅಂಗೀಕರಿಸಿದೆ.

ಮಂಗಳೂರಿನ ಬಿಜೈನ ಅಪಾರ್ಟ್‌ಮೆಂಟ್‌ನ ಕಂಪೌಂಡ್ ಹಾಗೂ ನ್ಯಾಯಾಲಯದ ಹಳೆ ಕಟ್ಟಡದ ಗೋಡೆ ಮೇಲಿನ ಪ್ರಚೋದನಕಾರಿ ಗೋಡೆಬರಹ ಕಂಡು ಬಂದ ಹಿನ್ನೆಲೆಯಲ್ಲಿ ವಕೀಲರ ಸಂಘವು ಈ ನಿರ್ಣಯಕ್ಕೆ ಬಂದಿದೆ.

ಸಂಘದ ಅಧ್ಯಕ್ಷ ಎಂ. ನರಸಿಂಹ ಹೆಗಡೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕಾರ್ಯಕಾರಿಣಿಯಲ್ಲಿ, ಎಲ್ಲ ವಕೀಲರಿಗೂ ಮನವಿ ಮಾಡುವ ಸರ್ವಸಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

ನಗರದಲ್ಲಿ ಪ್ರಚೋದನಕಾರಿ ಗೋಡೆಬರಹ ಕಂಡುಬಂದಿದೆ. ಅದರಲ್ಲೂ ನ್ಯಾಯಾಲಯದ ಸಂಕೀರ್ಣ ಒಳಗಿನ ಸ್ಥಳವನ್ನೇ ದುಷ್ಕರ್ಮಿಗಳು ಬಳಸಿಕೊಂಡಿದ್ದಾರೆ. ಇಂತಹ ಕೃತ್ಯಗಳನ್ನು ಕಟುವಾಗಿ ಖಂಡಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ನರಸಿಂಹ ಹೆಗಡೆ ತಿಳಿಸಿದ್ದಾರೆ.

ತಮ್ಮ ಪರವಾಗಿ ವಕಾಲತ್ತು ನಡೆಸುವ ಹಕ್ಕು ಯಾವುದೇ ಕಕ್ಷಿದಾರರಿಗೆ ಇದೆ. ಆದರೆ, ಇದು ದೇಶದ್ರೋಹ ಪ್ರಕರಣವಾಗಿದ್ದು, ವಕೀಲರು ಸೇರಿಕೊಂಡು ಎಲ್ಲ ವಕೀಲರ ಸಮೂಹದಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News