ಪಡುಬಿದ್ರೆ ಸಂತೆ ಮಾರ್ಕೆಟ್ ನಲ್ಲಿ ಬೀದಿ ವ್ಯಾಪಾರ ಮಾಡುತ್ತಿದ್ದ 4 ಮಕ್ಕಳ ರಕ್ಷಣೆ
ಪಡುಬಿದ್ರಿ, ಡಿ.8: ಪಡುಬಿದ್ರೆ ಸಂತೆ ಮಾರ್ಕೆಟ್ನಲ್ಲಿ ಬೀದಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಮಕ್ಕಳನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಜಿಲ್ಲಾ ನಾಗರಿಕ ಸೇವಾ ಸಮಿತಿ ಟ್ರಸ್ಟ್, ಮಕ್ಕಳ ಸಹಾಯ ವಾಣಿ ಇಂದು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಬಾಲ ನ್ಯಾಯ ಮಂಡಳಿಯ ಸದಸ್ಯ ರಾಜೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನೀಡಿದ ದೂರಿನಂತೆ ಈ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ ಹಾವೇರಿ, ಗದಗ, ಬೀಜಾಪುರ, ಕುಷ್ಟಗಿ ಮೂಲದ ಅಪ್ರಾಪ್ತ 3 ಗಂಡು ಹಾಗೂ ಓರ್ವ ಹೆಣ್ಣು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಮುಂದೆ ಹಾಜರು ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಯೋಜನಾ ನಿರ್ದೇಶಕಿ ಪೂರ್ಣಿಮಾ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತೆ ಸುರಕ್ಷಾ, ಸುನಂದಾ, ಸಂದೇಶ್, ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ, ಮಕ್ಕಳ ಸಹಾಯವಾಣಿಯ ವೃಷಕ್, ಪ್ರಮೋದ್ ಭಾಗವಹಿಸಿದ್ದರು.