ಉಡುಪಿ: ಜಿಲ್ಲೆಯ ನೆರೆ/ಪ್ರವಾಹ ಹಾನಿ ಸಮೀಕ್ಷೆಗೆ ಬಂದ ಕೇಂದ್ರ ತಂಡ
ಉಡುಪಿ, ಡಿ.14: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಆಗಸ್ಟ್, ಸೆಫ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಬಂದ ನೆರೆ/ಪ್ರವಾಹ ದಿಂದಾದ ಹಾನಿಯ ಕುರಿತು ಸಮೀಕ್ಷೆಗಾಗಿ ಕೇಂದ್ರದಿಂದ ಆಗಮಿಸಿದ ತಂಡ, ಜಿಲ್ಲೆಯಲ್ಲಿ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಮತ್ತು ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು.
ಉಡುಪಿ ತಾಲೂಕು ಶಿವಳ್ಳಿಯ ಪಾಸ್ಕುದ್ರು ಪ್ರದೇಶಕ್ಕೆ ಭೇಟಿ ನೀಡಿದ ತಂಡವು ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿತು. ನಂತರ ಉಡುಪಿ ನಗರಕ್ಕೆ ನೀರು ಒದಗಿಸುವ ಬಜೆ ಡ್ಯಾಂಗೆ ಆಗಮಿಸಿದ ತಂಡ, ನೆರೆ ಸಂದರ್ಭದಲ್ಲಿ ಬಜೆ ಅಣೆಕಟ್ಟಿನ ಪಂಪಿಂಗ್ ಸ್ಟೇಶನ್ ನೀರಿನಿಂದ ಮುಳುಗಿ, ನಗರಕ್ಕೆ ನೀರು ಸರಬರಾಜು ವ್ಯತ್ಯಯವಾಗಿದ್ದರ ಬಗ್ಗೆ ಪರಿಶೀಲಿಸಿ, ಅಣೆಕಟ್ಟಿನ ಎತ್ತರ ಮತ್ತು ನೀರಿನ ಹರಿವಿನ ಪ್ರಮಾಣದ ಕುರಿತಂತೆ ಮಾಹಿತಿಗಳನ್ನು ಕಲೆ ಹಾಕಿತು.
ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಾಯಿ ಎಂಬಲ್ಲಿಗೆ ಭೇಟಿ ನೀಡಿದ ಸಮೀಕ್ಷಾ ತಂಡ, ಅಲ್ಲಿ ನೆರೆಯಿಂದ 3 ಮನೆಗಳು ಸಂಪೂರ್ಣ ಹಾಳಾಗಿದ್ದ ಪ್ರದೇಶವನ್ನು ವೀಕ್ಷಿಸಿ, ಸ್ಥಳೀಯರೊಂದಿಗೆ ನೆರೆ ಬಂದ ದಿನದ ಪರಿಸ್ಥಿತಿಯ ಬಗ್ಗೆ ವಿವರ ಸಂಗ್ರಹಿಸಿತು.
ಮಾಹಿತಿ ಸಂಗ್ರಹ: ಅಲ್ಲದೇ ತಾತ್ಕಾಲಿಕ ಪರಿಹಾರ ದೊರೆತಿರುವ ಬಗ್ಗೆ ಮತ್ತು ಸೂಕ್ತ ಸಮಯದಲ್ಲಿ ಜಿಲ್ಲಾಡಳಿತದಿಂದ ಅಗತ್ಯ ನೆರವು ದೊರೆತಿರುವ ಬಗ್ಗೆ ತಂಡ ಮಾಹಿತಿಗಳನ್ನು ಪಡೆದುಕೊಂಡಿತು. ಸ್ಥಳೀಯ ಕೃಷಿ ಜಮೀನಿಗೆ ಹಾನಿಯಾ ಗಿರುವ ಬಗ್ಗೆ ವಿವರಗಳನ್ನು ಪಡೆಯಿತು. ನಂತರ ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದಲ್ಲಿ ಹಾನಿಯಾಗಿರುವ ವೆಂಟೆಂಡ್ ಡ್ಯಾಂ, ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದ ಬಳಿಯ ಸೇತುವೆಗಾದ ಹಾನಿ, ಬ್ರಹ್ಮಾವರ ಜನ್ನಾಡಿಯಲ್ಲಿ ಹಾನಿಗೊಂಡ ರಸ್ತೆ ಹಾಗೂ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿರುವ ಸೈಕ್ಲೋನ್ ಶೆಲ್ಟರ್ನ್ನು ತಂಡದ ಸದಸ್ಯರು ಪರಿಶೀಲಿಸಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ನೆರೆ/ಪ್ರವಾಹದಿಂದ ಇದುವರೆಗೆ ಆಗಿರುವ ಹಾನಿಯ ಕುರಿತು ಸಮಗ್ರ ವಿವರಗಳನ್ನು ತಂಡ ಪಡೆಯಿತು. ನೆರೆ/ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲದಲ್ಲಿ ಸೂಕ್ತ ನೆರವು ನೀಡಿರುವ ಕಾರಣ ಜೀವ ಹಾನಿಯಾಗುವುದು ತಪ್ಪಿದೆ ಎಂಬುದನ್ನು ತಂಡದ ಗಮನಕ್ಕೆ ತರಲಾಯಿತು. ಈ ಬಗ್ಗೆ ತಂಡ ಮೆಚ್ಚುಗೆ ವ್ಯಕ್ತಪಡಿಸಿತು. ಮಧ್ಯರಾತ್ರಿಯಲ್ಲಿ ನೆರೆ/ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ತೋರಿದ ಧೈರ್ಯ ಎಲ್ಲಾ ವಿಕೋಪ ಸಂದರ್ಭದಲ್ಲೂ ಮಾದರಿ ಎಂದು ತಂಡ ಅಭಿಪ್ರಾಯಪಟ್ಟಿತು.
ಹಾನಿಯ ವಿವರ: ಸೆಪ್ಟಂಬರ್ ತಿಂಗಳಲ್ಲಿ ಜಿಲ್ಲೆಯ ಸಾಮಾನ್ಯ ಮಳೆ 405 ಮಿ.ಮಿ. ಆಗಿದ್ದು, ಈ ಬಾರಿ 1022 ಮಿ.ಮಿ. ಮಳೆ ಸುರಿದಿದೆ. ಇದು ಸಾಮಾನ್ಯ ಮಳೆಗಿಂತ ಶೇ.152ರಷ್ಟು ಅಧಿಕ. ಅಕ್ಟೋಬರ್ 10ರಿಂದ 15ರವರೆಗೆ ಸಾಮಾನ್ಯ ಮಳೆ 40 ಮಿ.ಮಿ, ಆಗಿದ್ದು, ಈ ಬಾರಿ 263 ಮಿ.ಮಿ. ಮಳೆ ಆಗಿದೆ. ಇದು ಶೇ. 553 ಅಧಿಕ ಮಳೆ ಆಗಿದೆ. ಇದರಿಂದಾಗಿಯೇ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಂಡಕ್ಕೆ ಮಳೆ ಹಾನಿಯ ವಿವರಗಳನ್ನು ನೀಡಿದರು.
ಜಿಲ್ಲೆಯ ಒಟ್ಟು 77 ಗ್ರಾಮಗಳಲ್ಲಿ ಹಾನಿಯಾಗಿದ್ದು, 827 ಕುಟುಂಬಗಳ 2874 ಜನರನ್ನು ರಕ್ಷಿಸಲಾಗಿದೆ. ಒಟ್ಟು 31 ಕಾಳಜಿ ಕೇಂದ್ರಗಳನ್ನು ತೆರೆದಿದ್ದು 1201 ಮಂದಿಗೆ ಆಶ್ರಯ ನೀಡಲಾಗಿತ್ತು. 3694 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 32,370.39 ಲಕ್ಷ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಕೇಂದ್ರ ತಂಡದ ಸದಾನಂದ ಬಾಬು, ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಪ್ರಾದೇಶಿಕ ಮುಖ್ಯ ಇಂಜನಿಯರ್ ದೀಪ್ಶೇಖರ್ ಸಿಂಘ್ವಾಲ್, ಕೆಎಸ್ಎನ್ ಡಿಎಂಸಿಯ ಹಿರಿಯ ವಿಜ್ಞಾನಿ ಡಾ.ಸಿ.ಎನ್.ಪ್ರಭು, ಜಿಪಂ ಸಿಇಓ ಡಾ. ನವೀನ್ ಭಟ್, ಎಸ್ಪಿವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.