ಸ್ಥಳೀಯರಿಗೆ ಅನ್ಯಾಯವಾಗದಂತೆ ಕೋಸ್ಟಲ್ ಬರ್ತ್ ನಿರ್ಮಾಣ: ಸಂಸದ ನಳಿನ್
ಮಂಗಳೂರು, ಡಿ.14: ಭೂಸಾರಿಗೆ, ವಾಯುಯಾನದಷ್ಟೇ ಮಹತ್ವ ನೌಕಾಯಾನಕ್ಕೂ ಇದೆ. ಅದೇ ಕಾರಣದಿಂದ ಸಾಗರಮಾಲಾ ಯೋಜನೆಯಡಿ ಮಂಗಳೂರಿನಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆಶ್ವಾಸನೆ ನೀಡಿದ್ದಾರೆ.
ಕಸ್ಬಾ ಬೆಂಗ್ರೆ ಹಳೆ ಬಂದರು ಪ್ರದೇಶದಲ್ಲಿ ಇಂದು ಸಾಗರಮಾಲಾ ಯೋಜನೆಯಡಿಯಲ್ಲಿ 65 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ ಹಾಗೂ 29 ಕೋಟಿ ರೂ. ವೆಚ್ಚದ ಡ್ರೆಜ್ಜಿಂಗ್ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೋಸ್ಟಲ್ ಬರ್ತ್ ನಿರ್ಮಾಣದಿಂದ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಈ ಮೂಲಕ ಬಹಳ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಕಳೆದ ವರ್ಷ ಆಡಳಿತಾತ್ಮಕ ಹಾಗೂ ನಂತರ ತಾಂತ್ರಿಕ ಮಂಜೂರಾತಿ ಲಭಿಸಿದೆ. ಬಳಿಕ ಪರಿಸರ ಮತ್ತು ಸಿಆರ್ಝೆಡ್ ಅನುಮೋದನೆಯೂ ಆಗಿದೆ. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಚೆನ್ನೈಯ ಎಂಜೆ ಕನ್ಸ್ಟ್ರಕ್ಷನ್ ಗುತ್ತಿಗೆ ಪಡೆದುಕೊಂಡಿದೆ. ಕಾಮಗಾರಿ ನಡೆಸಲು ನ.21ರಂದು ಕಾರ್ಯಾದೇಶವಾಗಿದ್ದು, 2023ರ ಡಿಸೆಂಬರ್ಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತಾವಿತ ದಕ್ಕೆ 350 ಮೀ. ಉದ್ದ ಮತ್ತು 7 ಮೀ. ಆಳ ಇರಲಿದೆ. ಈಗ ದಕ್ಕೆಯಲ್ಲಿ ಲ್ಗುಣಿ ನದಿ 4 ಮೀ. ಆಳವಿದ್ದರೆ, 7 ಮೀ. ಆಳ ಮಾಡುವುದರಿಂದ ಬೃಹತ್ ನೌಕೆಗಳು ಬರಲಿವೆ ಎಂದವರು ಹೇಳಿದರು.
30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬೆಂಗ್ರೆ ಬದಿಯಲ್ಲಿ ಮೈನಸ್ 7 ಮೀಟರ್ ಆಳದಲ್ಲಿ ಡ್ರೆಜ್ಜಿಂಗ್ ಮಾಡಲಾಗುತ್ತಿದ್ದು, ಇದರಿಂದ ನೌಕೆಗಳು ಹೆಚ್ಚು ಸರಕಿನೊಂದಿಗೆ ಬರುವುದು ಸಾಧ್ಯವಾಗಲಿದೆ, ಅಲ್ಲದೆ ದೋಣಿಗಳ ದುರಂತ ತಪ್ಪಲಿದೆ ಎಂದರು.
ಮಂಗಳೂರಿನ ಕರಾವಳಿಗೆ ಹೊಸ ದಿಶೆ ನೀಡುವಂತಹ ದೇಶದಲ್ಲೇ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಕೆಂಜಾರಿನಲ್ಲಿ ತಲೆಯೆತ್ತಲಿದೆ ಕೇಂದ್ರ ಸರ್ಕಾರ ಅದಕ್ಕೆ 1000 ಕೋಟಿ ರೂ. ಬಿಡುಗಡೆ ಮಾಡಿದೆ. ಅಲ್ಲದೆ ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಮಂಗಳೂರು ಬಂದರು ಅಭಿವೃದ್ದಿಗೆ 5000 ಕೋಟಿ ರೂ. ಮೀಸಲಿಡಲಾಗಿದೆ. ಕೋಸ್ಟ್ ಗಾರ್ಡ್ ಅಕಾಡೆಮಿ ಕೇರಳಕ್ಕೆ ಹೋಗುವುದನ್ನು ಇಲ್ಲಿಗೆ ತರಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವೂ ಜಾಗ ಒದಗಿಸಿಕೊಟ್ಟಿದೆ, ತಲಪಾಡಿಯಿಂದ ಕುಂದಾಪುರದವರೆಗೆ ಸಮುದ್ರ ಬದಿಯಲ್ಲಿ ಮೀನುಗಾರರು ಮತ್ತು ಮೀನುಗಾರಿಕೆಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ವಿನಂತಿಸಲಾಗಿದೆ, ಅದರ ಅನುಮೋನೆ ಸಿಗಲಿದೆ ಎಂದವರು ಹೇಳಿದರು.
ಕುಳಾಯಿಯಲ್ಲಿ ಮೀನುಗಾರಿಕಾ ಜೆಟ್ಟಿಯೂ ಹಲವು ವಿಳಂಬದ ಬಳಿಕ ಈಗ ಅನುಮೋದನೆ ದೊರಕಿದ್ದು, 250 ಕೋಟಿ ರೂ.ನ ಈ ಯೋಜನೆಗೆ ಶೀಘ್ರ ಟೆಂಡರ್ ಆಗಲಿದೆ. ಇದರಿಂದ ಮೀನುಗಾರರ ಸಮಸ್ಯೆಯೂ ಪರಿಹಾರವಾಗಲಿದೆ. ಹೆಜಮಾಡಿಯಲ್ಲೂ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರಕಿದೆ ಎಂದು ಸಂಸದ ಳಿನ್ ಕುಮಾರ್ ಕಟೀಲು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಹಳೆ ಮಂಗಳೂರು ಬಂದರಿನ ಬೆಂಗ್ರೆ ಬದಿ ಡ್ರೆಜ್ಜಿಂಗ್ನಲ್ಲಿ ಸಿಗುವ 11 ಲಕ್ಷ ಟನ್ ಮರಳನ್ನು ಸರಕಾರದ ಆದೇಶದಂತೆ ಸೋಮೇಶ್ವರ ಪ್ರದೇಶಕ್ಕೆ ಹಾಕಲಾಗುವುದು ಎಂದರು.
ಮುಂದೆ ಬೆಂಗ್ರೆಯ ಖಾಲಿ ಬಿದ್ದಿರುವ ಸರಕಾರದ 155 ಎಕ್ರೆ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಯೋಜನೆ ಇದೆ, ಈ ಮೂಲಕ ಬೆಂಗ್ರೆಯನ್ನು ಬಂಗಾರವನ್ನಾಗಿ ಪರಿವರ್ತಿಸಲು ಜನರು ಸಹಕರಿಸಬೇಕು ಎಂದರು.
ಮಂಗಳೂರು ಮೇಯರ್ ದಿವಾಕರ್, ಉಪ ಮೇಯರ್ ವೇದಾವತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೊಗವೀರ ಮಹಾಸಭಾ ಅಧ್ಯಕ್ಷ ಚೇತನ್ ಬೆಂಗ್ರೆ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಕಾರ್ಪೊರೇಟರ್ಗಳಾದ ಪೂರ್ಣಿಮಾ, ಸುನಿತಾ, ಮುನೀಬ್, ಜಗದೀಶ್ಶೆಟ್ಟಿ ಬೋಳೂರು, ಗುತ್ತಿಗೆದಾರ ಗೋಮತಿ ಸಂಕರ್, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯನಿರ್ವಾಹಕ ಇಂಜಿನಿಯರ್ ಸುಜನ್ ಚಂದ್ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
2017ರಲ್ಲೇ ಕೋಸ್ಟಲ್ ಬರ್ತ್ಗೆ ಅಧ್ಯಯನ ನಡೆದಿತ್ತು. ಈಗ ಅದು ನಿಜವಾಗುವ ಹಂತ ತಲಪಿದೆ, ಈ ಮೊದಲು 300 ಟನ್ ಸಾಮರ್ಥ್ಯದ ದೋಣಿಗಳಷ್ಟೇ ಬರುತ್ತಿದ್ದರೆ ನೂತನ ಬರ್ತ್ನಿಂದಾಗಿ 5000 ಟನ್ ಸಾಮರ್ಥ್ಯದ ಹಡಗುಗಳು ಜೆಟ್ಟಿಗೆ ಆಗಮಿಸುವುದು ಸಾಧ್ಯವಾಗಲಿದೆ. ಯಾವುದೇ ಪ್ರದೇಶದಿಂದ ಸರಕು ಸಾಮಾಗ್ರಿಗಳನ್ನು ಇಲಿ್ಲಗೆ ತರಬಹುದಾಗಿದೆ.
*ವೇದವ್ಯಾಸ ಕಾಮತ್, ಶಾಸಕರು.
ಹೊಸ ಧಕ್ಕೆ ನಿರ್ಮಾಣದಿಂದ 10 ಸಾವಿರ ಟನ್ವರೆಗೆ ಸರಕು ಸಾಗಾಟ ವ್ಯವಸ್ಥೆ
ಮಂಗಳೂರು ಹಳೆ ಬಂದರ್ ದಕ್ಕೆ 4 ಮೀ. ಮತ್ತು ಎನ್ಎಂಪಿಟಿಯಲ್ಲಿ 12 ಮೀ. ಆಳ ಇದೆ. ಹಳೆ ಬಂದರಿನಿಂದ ಸಣ್ಣ ಪ್ರಮಾಣದಲ್ಲಿ ಬಹುತೇಕ ಲಕ್ಷದ್ವೀಪಕ್ಕೆ ಮಾತ್ರ ಸರಕು ಸಾಗಾಟ ನಡೆಯುತ್ತದೆ. ಹೊಸ ದಕ್ಕೆ ನಿರ್ಮಾಣವಾದರೆ, ದೊಡ್ಡ ಪ್ರಮಾಣದಲ್ಲಿ ಲಕ್ಷದ್ವೀಪ, ಗುಜರಾತ್, ಮಹಾರಾಷ್ಟ್ರ ಸಹಿತ ಇತರ ರಾಜ್ಯಗಳಿಗೂ ಆಮದು-ರ್ತು ಮಾಡಬಹುದು. ಒಂದು ಬಾರಿಗೆ 5-10 ಸಾವಿರ ಟನ್ ಸರಕು ಕಳುಹಿಸಬಹುದು. ದಕ್ಕೆ ನಿರ್ಮಾಣ ಜಾಗದಲ್ಲಿ ಎರಡು ಗೋದಾಮು, ಓವರ್ ಹೆಡ್ ಟ್ಯಾಂಕ್, ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ, ಬಾವಿ, ವಿದ್ಯುತ್ ಸಂಪರ್ಕ ಸಹಿತ ಮೂಲಸೌಲಭ್ಯವಿರಲಿದೆ.
1980ರಲ್ಲಿ ಬ್ರೇಕ್ ವಾಟರ್ ನಿರ್ವಹಣೆ ಸಂದರ್ಭ ಮೈನಸ್ 4 ಮೀ. ಆಳಕ್ಕೆ ಹೂಳೆತ್ತಲಾಗಿತ್ತು. ಅದರ ನಂತರ 3-4 ಮೀ.ಗೆ ನಿರ್ವಹಣೆ ಮಾಡಲಾಗುತ್ತಿತ್ತು. ಐದು ವರ್ಷದ ಹಿಂದೆ 4 ಮೀ. ಹೂಳೆತ್ತಲಾಗಿತ್ತು. ಇದೀಗ ಲಕ್ಷದ್ವೀಪಕ್ಕೆ ವಿವಿಧ ಸರಕು ಸಾಗಾಟ ಮಾಡುವ ವಾಣಿಜ್ಯ ಬಂದರಿನ ಅಭಿವೃದ್ಧಿಗಾಗಿ ಸಮಗ್ರ ಹೂಳೆತ್ತುವ ಕಾಮಗಾರಿ ನಡೆಯಲಿದೆ. ಈಗಿರುವ ಮೈನಸ್ 4 ಮೀ. ಆಳವನ್ನು ಎರಡನೇ ಹಂತದ ವಾಣಿಜ್ಯ ದಕ್ಕೆಯಿಂದ ಅಳಿವೆ ಬಾಗಿಲಿನ ಸಮುದ್ರ ಸಂಪರ್ಕಿಸುವ ಮೈನಸ್ 7 ಮೀ. ಆಳ ಇರುವ ತನಕ ಹೂಳೆತ್ತಲಾಗುತ್ತದೆ.
ಪಂಪ್ವೆಲ್ ಬಗ್ಗೆ ಟೀಕಿಸಿದದವರು ಅಭಿವೃದ್ಧಿ ಯೋಜನೆಗ ಬಗ್ಗೆ ಚರ್ಚಿಸುತ್ತಿಲ್ಲ: ನಳಿನ್
ಪಂಪ್ವೆಲ್ ಸೇತುವೆ ಕಾಮಗಾರಿ ವಿಳಂಬವಾದ ಬಗ್ಗೆ ಟೀಕೆ ಮಾಡಿದವರು ಗುರುಪುರ ಸೇತುವೆ ಒಂದು ವರ್ಷದಲ್ಲಿ ಪೂರ್ಣಗೊಳಿಸಿದ ಬಗ್ಗೆಯಾಗಲಿ, ಕೇರಳಕ್ಕೆ ಹೋಗುವ ಕೋಸ್ಟ್ಗಾರ್ಡ್ ಅಕಾಡೆಮಿ ಮಂಗಳೂರಿಗೆ ಮಂಜೂರು ಆಗಿರುವ ಬಗ್ಗೆಯಾಗಲಿ ಚರ್ಚಿಸುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲು ಸಭೆಯಲ್ಲಿಂದು ಪ್ರತಿಕ್ರಿಯಿಸಿದರು.
ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದ ವೇಳೆ ಕೋಸ್ಟಲ್ ಬರ್ತ್ ನಿರ್ಮಾಣವನ್ನು ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಸಲಹೆ ನೀಡಿದ ಅವರು, ಕಾಮಗಾರಿಯಲ್ಲಿ ಲೋಪದೋಷ, ಭ್ರಷ್ಟಾಚಾರ ಕಂಡು ಬಂದಲ್ಲಿ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆಯನ್ನೂ ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ನೀಡಿದರು.