ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಮೊದಲು ಗ್ರಾಮಗಳ ಭೌತಿಕ ಸಮೀಕ್ಷೆ ನಡೆಸಿ: ರಾಜ್ಯ ಸರಕಾರಕ್ಕೆ ಭಾಕಿಸಂ ಆಗ್ರಹ
ಉಡುಪಿ, ಡಿ.15: ಹಸಿರು ಪೀಠ ನೀಡಿರುವ ಮಧ್ಯಂತರ ತೀರ್ಪಿನ ಪರಿಣಾಮ ಪಶ್ಚಿಮಘಟ್ಟದ ಸಂರಕ್ಷಣೆಯ ದೃಷ್ಟಿಯಿಂದ ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಡಿ.30ರೊಳಗಾಗಿ ಜಾರಿ ಗೊಳಿಸಬೇಕಾದ ಅನಿವಾರ್ಯತೆ ಕೇಂದ್ರ ಸರಕಾರದ ಮುಂದಿದೆ. ಈ ವರದಿ ಯಥಾವತ್ತಾಗಿ ಜಾರಿಯಾದರೆ ಆ ಭಾಗದ ಜನರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.
ಕೇರಳ ರಾಜ್ಯದಲ್ಲಿ ಈ ವರದಿಯ ಸಮಗ್ರ ಅಧ್ಯಯನ ನಡೆಸಿ, ಮಲಯಾಳಂ ಭಾಷೆಗೆ ತರ್ಜುಮೆಗೊಳಿಸಿ, ಪ್ರಕಟಿಸಿ, ಪ್ರತಿ ಗ್ರಾಮಗಳಲ್ಲಿ ನಕ್ಷೆಯನ್ನಿಟ್ಟು ಕೊಂಡು ನೈಸರ್ಗಿಕ ಕಾಡು, ರೈತರು ಬೆಳೆಸಿದ ಕಾಡು, ಕೃಷಿಭೂಮಿ ಹಾಗೂ ಜನವಸತಿ ಪ್ರದೇಶ ಎಂದು ಪ್ರತ್ಯೇಕಿಸಿ, ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದ್ದ 13,108.7 ಚದರ ಕಿಲೋಮೀಟರ್ ಪೈಕಿ 3,115 ಚದರ ಕಿ.ಮೀ.ನ್ನು ಕೈ ಬಿಡುವಂತೆ ಕೇರಳ ಸರಕಾರ ಶಿಫಾರಸ್ಸು ಮಾಡಿದ್ದರ ಪರಿಣಾಮ ಕೇಂದ್ರ ಸರಕಾರ ಹಾಗೂ ಹಸಿರು ಪೀಠ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಅಲ್ಲಿ ಕೇವಲ 9,993.7 ಚದರ ಕಿ.ಮೀ.ನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಉಡುಪ ಇಲ್ಲಿ ನಡೆದ ಭಾಕಿಸಂ ಸಭೆಯಲ್ಲಿ ವಿವರಿಸಿದರು.
ಆದರೆ ಕೇರಳಕ್ಕಿಂತ ಉತ್ತಮ ವರದಿ ನೀಡುತ್ತೇವೆ, ಸದನ ಸಮಿತಿ ಮೂಲಕ ಸಮೀಕ್ಷೆ ನಡೆಸಿ ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದ್ದ ರಾಜ್ಯ ಸರಕಾರ ಕೊನೆಗೆ ಜನರ ವಿರೋಧವಿದೆ, ಆದ್ದರಿಂದ ವರದಿಯ ಅನುಷ್ಠಾನವನ್ನು ಕೈಬಿಡಬೇಕು ಎಂದು ಶಿಫಾರಸ್ಸು ಮಾಡಿ ಕೈತೊಳೆದು ಕೊಂಡಿದೆ. ಅಲ್ಲದೇ ಈ ವರದಿಯಲ್ಲಿ ಅತಿ ಹೆಚ್ಚು ಪ್ರದೇಶಗಳನ್ನು (20,668 ಚದರ ಕಿ.ಮೀ.) ಪರಿಸರ ಸೂಕ್ಷ್ಮ ಪ್ರದೇಶದ ಹೆಸರಿನಲ್ಲಿ ಕಳೆದು ಕೊಳ್ಳಲು ಮುಂದಾಗಿರುವ ಕರ್ನಾಟಕ ಸರಕಾರ ಈವರೆಗೂ ಹಸಿರು ಪೀಠದ ಮುಂದೆ ತನ್ನ ಅಹವಾಲನ್ನು ಮಂಡಿಸಲು ಮುಂದೆ ಬಂದಿಲ್ಲ.
ಯಡಿಯೂರಪ್ಪ ನೇತೃತ್ವದ ಈ ಸರಕಾರವೂ ಹಿಂದಿನವರು ಹೇಳಿದಂತೆ, ಸದನದ ಉಪಸಮಿತಿ ರಚಿಸಿ, ವರದಿಯನ್ನು ಪರಿಶೀಲಿಸಿ, ಜಾರಿ ಯಾಗಲು ಬಿಡುವುದಿಲ್ಲ ಎಂಬ ರಾಜಕೀಯ ಹೇಳಿಕೆಗಳನ್ನು ನೀಡಿ ಕಾಲ ಕಳೆಯುತ್ತಿದೆ. ಈ ಭಾಗದ ಜನರ ಹಿತಾಸಕ್ತಿಯ ದೃಷ್ಟಿಯಿಂದ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ನಕ್ಷೆಯನ್ನು ಇಟ್ಟುಕೊಂಡು, ಭೌತಿಕ ಸಮೀಕ್ಷೆ ನಡೆಸಿ, ಯಾವ ಪ್ರದೇಶವನ್ನು ಕೈಬೀಡಬೇಕೆಂಬ ಬಗ್ಗೆ ಸ್ಪಷ್ಟ ಕಾರಣ ನೀಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡದಿದ್ದಲ್ಲಿ, ಈ ವರದಿಯ ಅನುಷ್ಠಾನ ಜನಜೀವನಕ್ಕೆ ಮಾರಕವಾಗುವುದು ಖಂಡಿತ ಎಂದು ಸತ್ಯನಾರಾಯಣ ಉಡುಪಿ ಹೇಳಿದ್ದಾರೆ.
ಕೇರಳದಂತೆ ರಾಜ್ಯದಲ್ಲೂ ಭೌತಿಕ ಸಮೀಕ್ಷೆ ನಡೆಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ನೀಡದೇ ಅಸಡ್ಡೆ ತೋರಿರುವ ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಜನಜೀವನ ಬಲಿಯಾಗುತ್ತಿದೆ. ಇದರ ವಿರುದ್ಧ ಜನರು ದಂಗೆ ಏಳುವ ಪರಿಸ್ಥಿತಿ ಬಾರದಂತೆ ಸರಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ಎಚ್ಚರಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ನವೀನ್ಚಂದ್ರ ಜೈನ್ ವಹಿಸಿದ್ದರು. ಭಾಕಿಸಂ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಮಾತ ನಾಡಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಜೀವನಕ್ಕೆ ಈ ವರದಿ ಮಾರಕ ವಾಗಿದ್ದು ಇದು ಯಥಾವತ್ತಾಗಿ ಜಾರಿಯಾದರೆ ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಜನಪ್ರತಿನಿಧಿಗಳು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹೋರಾಟಕ್ಕೂ ಸಂಘಟನೆ ಸಿದ್ಧವಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್, ತಾಲೂಕು ಪ್ರಮುಖರಾದ ಉಮಾನಾಥ ರಾನಡೆ, ಸೀತಾರಾಮ ಗಾಣಿಗ, ಆಸ್ತೀಕ ಶಾಸ್ತ್ರಿ, ಪಾಂಡುರಂಗ ಹೆಗ್ಡೆ, ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ, ಚಂದ್ರಹಾಸ ಶೆಟ್ಟಿ, ಪ್ರಾಣೇಶ್ ಯಡಿಯಾಳ್ ಮುಂತಾದವರು ಉಪಸ್ಥಿತರಿದ್ದರು.
'ಜನರಿಗೆ ಮಾಹಿತಿಯನ್ನೇ ನೀಡದ ಸರಕಾರ, ಅಧಿಕಾರಿಗಳು'
ಡಾ. ಕಸ್ತೂರಿ ರಂಗನ್ ವರದಿ ಮಾತ್ರ ಜಾರಿಯಾಗುವುದೆಂಬ ನಂಬಿಕೆಯಲ್ಲಿದ್ದ ಜನರಿಗೆ, ಇದರೊಂದಿಗೆ ಪ್ರೊ.ಮಾಧವ ಗಾಡ್ಗೀಲ್ ಸಮಿತಿ ವರದಿ ಕೂಡ ಸೇರಿರುತ್ತದೆ ಎಂಬ ಅಂಶವನ್ನು ಸರಕಾರ ಹಾಗೂ ಅಧಿಕಾರಿಗಳು ನೀಡುತ್ತಿಲ್ಲ. 2017ರ ಎ.13ರಂದೇ ಜಾರಿಗೊಂಡ ಮೂಕಾಂಬಿಕ ವನ್ಯಜೀವಿ ಸಂರಕ್ಷಣಾ ಪ್ರದೇಶದ ವ್ಯಾಪ್ತಿಯಲ್ಲಿ ಉಡುಪಿ ಜಲ್ಲೆಯ 25 ಗ್ರಾಮಗಳ 12,508.03 ಹೆಕ್ಟೆರ್ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ.
ಅದೇ ರೀತಿ 2020ರ ಜು.2ರಿಂದ ಜಾರಿಗೆ ಬಂದ ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಈ ಜಿಲ್ಲೆಯ 11 ಗ್ರಾಮಗಳ 6816.01 ಹೆಕ್ಟೆರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದೂ, ಆ.28ರಿಂದ ಜಾರಿಗೆ ಬಂದ ಸೋಮೇಶ್ವರ ವನ್ಯಜೀವಿ ವಿಭಾಗದಲ್ಲಿ ಈ ಜಿಲ್ಲೆಯ 16 ಗ್ರಾಮಗಳ 6994.84 ಹೆಕ್ಟೆರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ.
ಈ ಬಗ್ಗೆ ನಮ್ಮ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಅರಿವಿದ್ದಂತೆ ಕಾಣುತ್ತಿಲ್ಲ. ಈ ಎಲ್ಲಾ ಗ್ರಾಮಗಳ ಪರಿಸರ ಸೂಕ್ಷ್ಮವಲಯಗಳು ಒಳ ಗೊಂಡಿರುವ ಸರ್ವೇ ನಂಬರ್ ಬಗ್ಗೆಯಾಗಲೀ ಅಥವಾ ಅದರಲ್ಲಿ ವಾಸವಿರುವ ಜನರ ಬಗ್ಗೆಯಾಗಲೀ, ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ.
ಮುಂದಿನ ದಿನಗಳಲ್ಲಿ ಆ ಭಾಗದ ಎಲ್ಲಾ ಜನರ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರುವುದು ಖಂಡಿತ. ಇವುಗಳಿಗೆ ಪರಿಸರ ಸೂಕ್ಷ್ಮ ವಲಯ (ಇಕೋ ಸೆನ್ಸಿಟಿವ್ ರೆನ್) ಎಂಬ ಪದ ಬಳಕೆ ಪ್ರೊ.್ರಗಾಡ್ಗಿಲ್ ವರದಿಯಲ್ಲಿ ಆಗಿದ್ದು, ಅದರಂತೆ ಈಸಂರಕ್ಷಿತ ಅರಣ್ಯಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ ಎಂಬುದು ಸ್ಪಷ್ಟ ಎಂದು ಸತ್ಯನಾರಾಯಣ ಉಡುಪ ಹೇಳಿದ್ದಾರೆ.