×
Ad

ಪಡುಕೆರೆಯಲ್ಲಿ ಕಿನಾರೆಯಲ್ಲಿ ಮರೀನಾ ನಿರ್ಮಾಣ: ಕಾರ್ಯಸಾಧ್ಯತಾ ವರದಿ ತಯಾರಿಸಲು ಜಿಲ್ಲಾಡಳಿತ ನಿರ್ಧಾರ

Update: 2020-12-16 21:49 IST

ಉಡುಪಿ, ಡಿ.16: ಪಡುಕರೆ ಬೀಚ್‌ನಲ್ಲಿ ಮರೀನಾ ನಿರ್ಮಾಣ ಕುರಿತಂತೆ ಕಾರ್ಯ ಸಾಧ್ಯತಾ ವರದಿ (ಫಿಸಿಬಲಿಟಿ ರಿಪೋರ್ಟ್) ಪಡೆಯುವ ಕುರಿತಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ ಬುಧವಾರ ಮಣಿಪಾಲದಲ್ಲಿರುವ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಪಡುಕರೆ ತೀರದಲ್ಲಿ ನೈಸರ್ಗಿಕ ದ್ವೀಪಗಳಿದ್ದು, ಸುಮಾರು 1.66 ಕಿಮೀ ನಿಂದ 2 ಕಿ.ಮೀ.ವರೆಗೆ ಬ್ರೇಕ್ ವಾಟರ್ ನಿರ್ಮಿಸಿ, 3.69 ಕಿಮೀ ಜಾಗದಲ್ಲಿ ಮರೀನಾ ನಿರ್ಮಿಸಬಹುದಾಗಿದೆ. ಈ ಕುರಿತು ಪುಣೆಯ ಸಿಡಬ್ಲೂಪಿಆರ್‌ಎಸ್‌ನಿಂದ ಕಾರ್ಯ ಸಾಧ್ಯತಾ ವರದಿಯನ್ನು ಪಡೆದು, ನಂತರ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ಈ ಯೋಜನೆಯನ್ನು ಕೈಗೊಳ್ಳುವಂತೆ ತಿಳಿಸಿದರು.

ಇಡೀ ಭಾರತದಲ್ಲಿ ಪೂರ್ಣ ಪ್ರಮಾಣದ ಮರೀನಾ ಇಲ್ಲವಾಗಿದ್ದು, ಉಡುಪಿಯ ಪಡುಕರೆಯಲ್ಲಿ ಮರೀನಾ ನಿರ್ಮಾಣವಾದಲ್ಲಿ, ಜಾಗತಿಕ ಪ್ರವಾಸಿ ತಾಣದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ವಿಪುಲ ಉದ್ಯೋಗಾವಕಾಶಗಳು ಮತ್ತು ರಾಜ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಇದು ಅತ್ಯಂತ ಪ್ರಮುಖ ಕೊಡುಗೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ಥಳೀಯ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ, ಸಿಆರ್‌ಝಡ್ ನಿಯಮ ಗಳ ಉಲ್ಲಂಘನೆಯಾಗದಂತೆ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು. ಮರೀನಾ ಯೋಜನೆಯಿಂದಾಗಿ ವಿವಿಧ ಮಾದರಿಯ ದೋಣಿಗಳು ವಿಹಾರ ನೌಕೆಗಳು ಮತ್ತು ಮನೋರಂಜನಾ ವಿಹಾರ ದೋಣಿಗಳು ಇಲ್ಲಿ ತಂಗಲು ಸಾಧ್ಯವಾಗಲಿದೆ. ತೇಲುವ ಸೇತುವೆ, ಹೋಟೆಲ್, ರೆಸ್ಟೋರೆಂಟ್, ಮನೆ ನಿರ್ಮಾಣ ಹಾಗೂ ವಿವಿಧ ಮಳಿಗೆಗಳನ್ನು ಸ್ಥಾಪಿಸಿ ಆದಾಯ ಗಳಿಸಬಹುದು ಎಂದವರು ತಿಳಿಸಿದರು.

ಕಾರ್ಯ ಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಯನ್ನು ಪೆಬ್ರವರಿ ಒಳಗೆ ನೀಡಿದಲ್ಲಿ, ಮುಂದಿನ ಬಜೆಟ್‌ನಲ್ಲಿ ಮರೀನಾ ನಿರ್ಮಾಣ ಕುರಿತಂತೆ ಅಗತ್ಯ ಅನುಮತಿಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಮರೀನಾ ಅನುಷ್ಠಾನ ಕುರಿತಂತೆ ಕಾರ್ಯ ಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿಯನ್ನು ಶೀಘ್ರದಲ್ಲಿ ಪಡೆಯಲು ಪ್ರಯತ್ನಿಸಲಾ ಗುವುದು. ಹಾಗೂ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

ಮರೀನಾ ಅನುಷ್ಠಾನ ಕುರಿತ ಪ್ರಾತ್ಯಕ್ಷಿಕೆ ವರದಿಯನ್ನು ಗೋವಾದ ಅಮೋಲ್ ಮರೈನ್ ಟೆಕ್‌ನ ಮಿಲಿಂದ ಪ್ರಭು ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮ ಶೇಖರ್ ಬೂರ್ಯಪ್ಪ ಕಮರೂರಮನೆ, ಪ್ರವಾಸೋದ್ಯಮ ಸಮಾಲೋಚಕ ಅಮಿತ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

800 ಕೋಟಿ ರೂ.ಯೋಜನೆ

ಮರೀನಾ ಇದೊಂದು ವಿಶಿಷ್ಠ ಯೋಜನೆಯಾಗಿದ್ದು, ಭಾರತದಲ್ಲಿ ಯಾವುದೇ ವಿಶ್ವ ದರ್ಜೆಯ ಸದ್ಯ ಮರೀನಾ ಇಲ್ಲ. ಪ್ರಸ್ತುತ ಕೊಚ್ಚಿನ್ ಮಾತ್ರ ಮರೀನಾ ಹೊಂದಿದ್ದು, ಅದೂ ಕೂಡಾ ಅಂತಾರಾಷ್ಟ್ರೀಯ ಬೋಟ್ ಮತ್ತು ವಿಹಾರ ನೌಕೆಗಳನ್ನು ಉಳಿಸಿಕೊಳ್ಳುವ ಸೌಲ್ಯಗಳನ್ನು ಹೊಂದಿಲ್ಲ.

ವಿವಿಧ ಕಾರಣಗಳಿಂದಾಗಿ ವಿದೇಶಿ ನೌಕೆಗಳು ಅರಬ್ಬೀ ಸಮುದ್ರ ಮಾರ್ಗ ವಾಗಿ ದಕ್ಷಿಣ ಏಷ್ಯಾ ದೇಶಗಳಿಗೆ ಸಾಗಿ ಅಲ್ಲಿಯೇ ಲಂಗರು ಹಾಕುತ್ತವೆ. ಒಂದು ವರ್ಷದಲ್ಲಿ ಸುಮಾರು 4000 ನೌಕೆಗಳು ಈ ಮಾರ್ಗದಲ್ಲಿ ಸಾಗಲಿದ್ದು, ಈ ಮಾರ್ಗದಲ್ಲಿ ಸೂಕ್ತ ಮರೀನಾದ ಕೊರತೆಯಿದೆ. ಪಡುಕೆರೆ ಯಲ್ಲಿ ನಿರ್ಮಾಣ ವಾಗುವ ಮರೀನಾಗೆ ಅಂದಾಜು 800 ಕೋಟಿ ರೂ. ವೆಚ್ಚವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News