ಮುಕ್ತ ಮತದಾನ ನಡೆಯಲಿ: ಎಸಿ ಮದನ್ ಮೋಹನ್
ಮಂಗಳೂರು : ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆಯ ಅಧಿಕಾರಿಗಳು ಆಯೋಗದ ಸೂಚನೆ, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಚ್ಯುತಿ ಬಾರದಂತೆ ಮುಕ್ತ ಮತ್ತು ನ್ಯಾಯಯುತ, ನಿಷ್ಪಕ್ಷಪಾತ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಮದನ್ ಮೋಹನ್ ಸೂಚನೆ ನೀಡಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಚುನಾವಣಾ ಆಯೋಗವು ಸಿದ್ಧಪಡಿಸಿದ ಗ್ರಾಪಂಗಳ ಚುನಾವಣೆ ಪ್ರಿಸೈಡಿಂಗ್ ಅಧಿಕಾರಿಗಳ ಕೈಪಿಡಿಯನ್ನು ಮತಗಟ್ಟೆಯ ಅಧಿಕಾರಿಗಳು ಸಂಪೂರ್ಣವಾಗಿ ಅರಿತುಕೊಂಡು ಆಯಾ ಕ್ಷೇತ್ರದ ಮತಗಟ್ಟೆಯಲ್ಲಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಸಿ ನಿರ್ವಹಿಸಿ ನಿಷ್ಪಕ್ಷಪಾತ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದರು.
ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೆ ತಕ್ಷಣ ಮೇಲಧಿಕಾರಿಗಳ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಂಡು ಮುಂದುವರಿಸಬೇಕು. ಮತದಾನ ಮಾಡಲು ಜನರು ಸರದಿಯಲ್ಲಿ ನಿಂತಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರತಿಯೊಬ್ಬರಿಗೂ ಥರ್ಮಲ್ ಸ್ಕಾನಿಂಗ್ ಮಾಡಬೇಕು ಎಂದರು.
ಮಂಗಳೂರು ತಾಲೂಕಿನ ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ಗ್ರಾಪಂ ಚುನಾವಣೆ ಸೂಕ್ಷ್ಮ ರೀತಿಯಲ್ಲಿ ಆಗಿರುವುದರಿಂದ ಗೊಂದಲ ಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಯಾವುದೇ ಹಂತದಲ್ಲಿ ನಿಯಮಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಕೋವಿಡ್ ಸೋಂಕು ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಪ್ರಮಾಣಿತ ಮಾರ್ಗಸೂಚಿಯಂತೆ ಅನುಸರಿಸಿಕೊಳ್ಳಬೇಕು ಎಂದರು.
ಮತದಾನ ಮುಗಿಯುವ ಒಂದು ಗಂಟೆಯ ಮುನ್ನ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶವಿದ್ದು, ಇದಕ್ಕೆ ಸಂಬಂಧಪಟ್ಟ ವರದಿಯನ್ನು ಆರೋಗ್ಯ ಇಲಾಖೆಯಿಂದ ಪಡೆದು ಮಸ್ಟರಿಂಗ್ ದಿನದಂದು ನೀಡಲಾಗುತ್ತದೆ ಎಂದರು.
ಮತಗಟ್ಟೆಯ ಅಧಿಕಾರಿಗಳು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನದಂದು ಚುನಾವಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಗುರುತು ಮಾಡಲಾದ ಮತ್ತು ಇತರ ಮತದಾರರ ಪಟ್ಟಿಗಳು, ಮತ ಪೆಟ್ಟಿಗೆಗಳು-1, ಅಳಿಸಲಾಗದ ಶಾಯಿ, ಮತಪತ್ರಗಳು, ವಿಶಿಷ್ಟ ಗುರುತಿನ ರಬ್ಬರ್ ಮೊಹರು ರಬ್ಬರ್ ಸ್ಯಾಂಪ್ ಇತ್ಯಾದಿಗಳನ್ನು ಮಸ್ಟರಿಂಗ್ ಕೇಂದ್ರದಲ್ಲಿ ಗಮನಿಸಬೇಕು ಎಂದರು.
ಚುನಾವಣಾ ಪ್ರಕ್ರಿಯೆಯ ತರಬೇತಿಯನ್ನು ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಐಇಸಿ ವಿಭಾಗದ ವಿಭಾಗಾಧಿಕಾರಿ ಹಾಗೂ ಉಪನ್ಯಾಸಕ ಸತೀಶ್ ಎಂ. ಹಾಗೂ ಸರಕಾರಿ ಶಿಕ್ಷಕ ಶಿಕ್ಷಣ ವಿದ್ಯಾಲಯದ ಉಪನ್ಯಾಸಕ ಪ್ರಕಾಶ್ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಕಾವೂರು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಾನ್ ಪಿಂಟೋ ಉಪಸ್ಥಿತರಿದ್ದರು.