ಡಿ.18: ಬ್ಯಾರಿ ಐತಿಹಾಸಿಕ ಗ್ರಂಥ, ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ
ಮಂಗಳೂರು, ಡಿ.17: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.18ರಂದು ಸಂಜೆ 4 ಗಂಟೆಗೆ ‘ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು ಐತಿಹಾಸಿಕ ಗ್ರಂಥ ಮತ್ತು ಬ್ಯಾರಿ ಹಿರಿಯರ ಮನದಾಳದ ಮಾತು ಸಾಕ್ಷಚಿತ್ರ ಡಿವಿಡಿ ಬಿಡುಗಡೆ’ ಸಮಾರಂಭವನ್ನು ಹಂಪನ ಕಟ್ಟೆಯ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿದ್ದು, ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು ಐತಿಹಾಸಿಕ ಗ್ರಂಥವನ್ನು ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಬಿಡುಗಡೆ ಮಾಡಲಿರುವರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬ್ಯಾರಿ ಹಿರಿಯರ ಮನದಾಳದ ಮಾತು ಸಾಕ್ಷಚಿತ್ರ ಡಿವಿಡಿ ಬಿಡುಗಡೆ ಮಾಡಲಿದ್ದು, ಹಿರಿಯ ಪತ್ರಕರ್ತರಾದ ಡಾ.ಮನೋಹರ್ ಪ್ರಸಾದ್ ಶುಭಾಶಂಸನೆ ಮಾಡಲಿದ್ದಾರೆ.
ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಅಬೂಬಕ್ಕರ್ ಸಿದ್ದೀಕ್, ಬ್ಯಾರಿ ಅಧ್ಯಯನ ಪೀಠದ ಸದಸ್ಯರಾದ ಎಂ.ಅಹ್ಮದ್ ಬಾವ ಮೊಹಿದಿನ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕಾಡಮಿಯ ಸದಸ್ಯ ಜಲೀಲ್ ಮುಕ್ರಿ ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿದ್ದಾರೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.