ಶಾಲಾರಂಭಕ್ಕೆ ವಿದ್ಯಾರ್ಥಿ-ಪೋಷಕರಿಗಿರುವ ಉತ್ಸಾಹ ಸರಕಾರಕ್ಕಿಲ್ಲ!

Update: 2020-12-18 12:43 GMT

ಮಂಗಳೂರು, ಡಿ.18: ಶಾಲೆಗಳನ್ನು ತೆರೆಯದೇ ಇರುವುದು ಮಕ್ಕಳ ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಮಾನವಾಧಿಕಾರ ಮತ್ತಿತರ ಎಲ್ಲಾ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಶಾಲೆಗಳನ್ನು ಪುನರಾರಂಭಿಸಿ ಬಡಮಕ್ಕಳ ಹಿತರಕ್ಷಣೆ ಮಾಡುವಲ್ಲಿ ರಾಜ್ಯದ ಶಿಕ್ಷಣ ಸಚಿವರು ವಿಫಲರಾಗಿದ್ದು ಅವರು ರಾಜೀನಾಮೆ ನೀಡಬೇಕೆಂದು ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿ ಒತ್ತಾಯಿಸಿದೆ.

ಮಕ್ಕಳಿಗೆ ಕೊರೋನ ಸೋಂಕಿನಿಂದ ಯಾವುದೇ ಅಪಾಯವಿಲ್ಲದಿರುವುದರಿಂದ, ಕೊರೋನ ಹರಡುವಿಕೆಯು ಈಗಾಗಲೇ ಅತಿ ವಿರಳವಾಗಿರುವುದರಿಂದಲೂ ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಡಿಸೆಂಬರ್ 15ರೊಳಗೆ ಪೂರ್ಣವಾಗಿ ತೆರೆಯಬೇಕೆಂದು ಸಮಿತಿಯು ಡಿಸೆಂಬರ್ 7ರಂದು ರಾಜ್ಯದ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿತ್ತು. ಮಾತ್ರವಲ್ಲ, ತೆರೆಯದೇ ಹೋದರೆ ನಾವೇ ಶಾಲೆಗಳನ್ನು ತೆರೆಯುವುದಾಗಿ ಹೇಳಿದಂತೆ, ಹಲವು ಶಾಲೆಗಳನ್ನು ತೆರೆಯುವ ಪ್ರಯತ್ನಗಳು ಈಗಾಗಲೇ ಆಗಿವೆ. ಆದರೆ ಇದೀಗ ಸರಕಾರ ಜನವರಿ 1ರಿಂದ ಸೀಮಿತ ಮಟ್ಟದಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಕೊಠಡಿಗಳಲ್ಲೇ ಆರಂಭಿಸುವುದಾಗಿ ಹೇಳಿದೆ.

ಆದರೆ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯದ ಕೊರೋನ ಕಾರ್ಯಪಡೆ - ತಾಂತ್ರಿಕ ಸಲಹಾ ಸಮಿತಿಯು 10 ಮತ್ತು 12ನೆ ತರಗತಿಗಳನ್ನು ಜನವರಿ 1 ರಿಂದ ತೆರೆಯಬಹುದೆಂದೂ, 6-9 ಮತ್ತು 11ನೇ ತರಗತಿಗಳಿಗೆ ಜನವರಿ 14ರಿಂದ ವಿದ್ಯಾಗಮ ಆರಂಭಿಸಬಹುದೆಂದೂ, 6ಕ್ಕಿಂತ ಕೆಳಗಿನ ತರಗತಿಗಳನ್ನು ತೆರೆಯಲೇಬಾರದೆಂದೂ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ನಮ್ಮ ಮಕ್ಕಳ ಭವಿಷ್ಯವನ್ನು ಶಾಶ್ವತವಾಗಿ ಕೆಡಿಸಲಿದೆ ಎಂದು ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷವಿಡೀ ಶಾಲೆ ತೆರೆಯದಿರಲು ಸರಕಾರ ನಿರ್ಧರಿಸಿದಂತಿದೆ. ಒಂದು ವರ್ಷ ಕಲಿಕೆಯಿಂದ ವಂಚಿತರಾದರೆ 3-15 ವಯಸ್ಸಿನ ಎಲ್ಲ ಮಕ್ಕಳೂ ಹಿಂದಿನದನ್ನು ಮರೆತು, ಮುಂದಿನದನ್ನು ಕಲಿಯಲಾಗದೆ ಎಂದೆಂದಿಗೂ ಕಷ್ಟಕ್ಕೀಡಾಗಲಿದ್ದಾರೆ ಎಂಬ ಸಾಮಾನ್ಯ ಜ್ಞಾನವೂ ಈ ಸಮಿತಿಯವರಿಗೆ ಇದ್ದಂತಿಲ್ಲ. ಜೊತೆಗೆ, ಈ ಸಂಕಷ್ಟಕ್ಕೆ ಒಳಗಾಗುವ ಬಹುತೇಕ ಮಕ್ಕಳು ಅತ್ಯಂತ ಕೆಳಸ್ತರದ ವರ್ಗಗಳಿಗೆ ಸೇರಿದ ಮಕ್ಕಳಾಗಿದ್ದು ಅವರು ಪೂರ್ಣವಾಗಿ ಶಾಲೆ ತೊರೆದು ಬಾಲ ಕಾರ್ಮಿಕ ಹಾಗು ಜೀತ ಕಾರ್ಮಿಕರಾಗುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಬಾಲ್ಯ ವಿವಾಹ ಮತ್ತು ಮಕ್ಕಳ ಸಾಗಾಣಿಕೆ ಹೆಚ್ಚಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ರಾಜ್ಯದ ತಥಾಕಥಿತ ತಾಂತ್ರಿಕ ಸಲಹಾ ಸಮಿತಿಯು ಈ ವೈಜ್ಞಾನಿಕ ಸತ್ಯಕ್ಕೆ ತೀರಾ ತದ್ವಿರುದ್ಧವಾದ, ಅಸಂಬದ್ಧವಾದ ಸಲಹೆಯನ್ನು ನೀಡಿರುವುದು ಖಂಡನೀಯವಾಗಿದೆ. ಆದ್ದರಿಂದ ಇಂಥ ಅವೈಜ್ಞಾನಿಕವಾದ, ಮಕ್ಕಳ ಹಿತಾಸಕ್ತಿಗಳಿಗೆ ಮಾರಕವಾದ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೆಂದೂ, ಈ ತಾಂತ್ರಿಕ ಸಮಿತಿಯನ್ನು ಈ ಕೂಡಲೇ ಬರ್ಖಾಸ್ತು ಮಾಡಬೇಕೆಂದೂ ಸಮಿತಿ ಆಗ್ರಹಿಸಿದೆ.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ತಜ್ಞರ ಸಮಿತಿಯ ಅಂದಾಜು ಈಗಷ್ಟೇ ಪ್ರಕಟವಾಗಿದ್ದು, ದೇಶದ ಶೇ.60 ರಷ್ಟು ಜನರಿಗೆ ಕೊರೋನ ಸೋಂಕಿರಬಹುದೆಂದೂ, ಅದರ ಹರಡುವಿಕೆಯು ಇಳಿಯುತ್ತಿದೆಯೆಂದೂ ಹೇಳಿದೆ. ನಮ್ಮ ರಾಜ್ಯದ ಆರೋಗ್ಯ ಇಲಾಖೆಯು ಈ ಹಿಂದೆ ಪ್ರಕಟಿಸಿದ್ದ ಮಾಹಿತಿಯಲ್ಲೂ ಅದನ್ನೇ ಹೇಳಲಾಗಿತ್ತು. ಹಾಗೆಯೇ, ಕೊರೋನ ಸೋಂಕಿನಿಂದ ಎಲ್ಲಾ ವಯೋವರ್ಗಗಳಲ್ಲಾಗಿರುವ ಸಾವುಗಳ ಬಗ್ಗೆ ಹಲವು ದೇಶಗಳ ವರದಿಗಳನ್ನಾಧಾರಿಸಿ ಯುರೋಪಿಯನ್ ಜರ್ನಲ್ ಆಫ್ ಎಪಿಡೆಮಿಯೋಲಜಿಯಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲೂ ಮಕ್ಕಳಲ್ಲಿ ಕೊರೋನ ಸೋಂಕಿನಿಂದ ಯಾವುದೇ ಮಾರಣಾಂತಿಕ ಸಮಸ್ಯೆಗಳಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದ್ದರಿಂದ ಬಾಲವಾಡಿಯಿಂದ 12ರವರೆಗೆ ಎಲ್ಲಾ ತರಗತಿಗಳನ್ನು ಈ ಕೂಡಲೇ ತೆರೆಯುವುದರಿಂದ ಯಾವುದೇ ಸಮಸ್ಯೆಯಾಗದು. ಈ ಕೂಡಲೇ ಶಾಲೆಗಳನ್ನು ತೆರೆಯುವುದರಿಂದ ಜೂನ್ ವರೆಗೆ ಈ ಶೈಕ್ಷಣಿಕ ವರ್ಷದ ಪಾಠಗಳನ್ನು ಕಲಿಸುವುದಕ್ಕೂ ಸಾಧ್ಯವಾಗಲಿದೆ. ನಮ್ಮೂರ ಶಾಲೆಗಳನ್ನು ನಾವೇ ತೆರೆಯುವ ಅಭಿಯಾನವನ್ನು ಇನ್ನಷ್ಟು ವ್ಯಾಪಕವಾಗಿ ಡೆಸಲಿದ್ದೇವೆ ಎಂದು ಸಮಿತಿ ತಿಳಿಸಿದೆ.

ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿಯ ಈ ಹೋರಾಟಕ್ಕೆ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಬೆಂಬಲ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News