ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ಗೆ ಕರಿ ಪತಾಕೆ ಪ್ರದರ್ಶಿಸಿದ ರೈತರು
ಚಂಡಿಗಢ, ಡಿ. 22: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಬೆಂಗಾವಲು ವಾಹನಗಳು ಮಂಗಳವಾರ ಅಂಬಾಲ ನಗರದ ಅಗ್ರಸೇನ್ ಚೌಕದಿಂದ ಹಾದು ಹೋಗುತ್ತಿದ್ದಾಗ ಪ್ರತಿಭಟನಾ ನಿರತ ದೊಡ್ಡ ಸಂಖ್ಯೆಯ ರೈತರು ಕರಿ ಪತಾಕೆ ಪ್ರದರ್ಶಿಸಿದ್ದಾರೆ.
ಪ್ರತಿಭಟನಾ ನಿರತ ರೈತರು ಬೆಂಗಾವಲು ವಾಹನಗಳನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿ ಮುಖ್ಯಮಂತ್ರಿ ಅವರ ಬೆಂಗಾವಲು ವಾಹನ ಸುರಕ್ಷಿತವಾಗಿ ಸಂಚರಿಸಲು ಅನುವು ಮಾಡಿಕೊಟ್ಟರು. ಈ ನಡುವೆ ಪ್ರತಿಭಟನಕಾರ ರೈತರು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಬೆಂಗಾವಲು ವಾಹನಗಳಲ್ಲಿದ್ದ ಆ್ಯಂಬುಲೆನ್ಸ್ ಹೊರತುಪಡಿಸಿ ಇತರ ವಾಹನಗಳ ಮೇಲೆ ದೊಣ್ಣೆಯಿಂದ ದಾಳಿ ನಡೆಸಿದರು. ಆದರೆ, ಖಟ್ಟರ್ ಅವರು ಯಾವುದೇ ರೀತಿಯ ಗಾಯಗಳಾಗದೆ ಪಾರಾಗಿದ್ದಾರೆ. ಅಂಬಾಲ ನಗರಾಡಳಿತ ಚುನಾವಣೆಗೆ ಸ್ಪರ್ಧಿಸಿದ ಬಿಜೆಪಿಯ ಮೇಯರ್ ಅಭ್ಯರ್ಥಿ ಹಾಗೂ ವಾರ್ಡ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲು ಖಟ್ಟರ್ ಅವರು ಇಲ್ಲಿಗೆ ಆಗಮಿಸಿದ್ದರು. ಕೃಷಿ ಕಾಯ್ದೆಗಳನ್ನು ಹಿಂದೆಗೆಯುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಪ್ರತಿಭಟನೆ ನಡೆಸುತ್ತಿರುವ ರೈತರು ಹೇಳಿದ್ದಾರೆ.
#Farmers, protesting against the #FarmLaws, are showing black flags to Haryana C.M, @mlkhattar at Ambala ! #FarmersProtest pic.twitter.com/03kGVDK8qX
— Ramandeep Singh Mann (@ramanmann1974) December 22, 2020